ವಿಚಾರ ಗೋಷ್ಠಿಯಲ್ಲಿ ರಾಮ್ ಮಾಧವ್ ಮಾತನಾಡಿದರು. ಅಮಿ ಗಣತ್ರ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಹಿಂದುತ್ವವು ವಿಶಾಲ ದೃಷ್ಟಿಕೋನವನ್ನು ಹೊಂದಿದ್ದು, ಎಲ್ಲರನ್ನೂ ಒಳಗೊಳ್ಳಲಿದೆ. ಆದರೆ, ಕೆಲವು ಪೂರ್ವಗ್ರಹ ಪೀಡಿತರು ದುರುದ್ದೇಶದಿಂದ ಇದನ್ನು ತಪ್ಪಾಗಿ ಅರ್ಥೈಸಿ, ‘ಹಿಂದೂಯಿಸಂ’ ಎಂಬ ಚೌಕಟ್ಟನ್ನು ನಿರ್ಮಿಸುತ್ತಿದ್ದಾರೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಲೇಖಕ ರಾಮ್ ಮಾಧವ್ ಹೇಳಿದರು.
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ದಿ ಹಿಂದುತ್ವ ಪ್ಯಾರಾಡಿಗ್ಮ್’ ಗೋಷ್ಠಿ ನಿರ್ವಹಿಸಿದ ಲೇಖಕಿ ಅಮಿ ಗಣತ್ರ, ‘ಹಿಂದುತ್ವದ ಬಗ್ಗೆ ದೇಶದಲ್ಲಿ ವಿವಿಧ ಪರಿಕಲ್ಪನೆಗಳಿವೆ. ಹಿಂದುತ್ವ ಎಂದೊಡನೆ ಸಾವರ್ಕರ್ ಮೊದಲಾದವರು ನಮ್ಮ ಕಣ್ಣ ಮುಂದೆ ಬರುತ್ತಾರೆ. ವಾಸ್ತವದಲ್ಲಿ ಹಿಂದುತ್ವ ಅಂದರೆ ಏನು’ ಎಂದು ಪ್ರಶ್ನಿಸಿದರು.
‘ಹಿಂದುತ್ವದ ಪ್ರತಿಪಾದಕರನ್ನು ಹಿಂದೆ ಉಗ್ರಗಾಮಿಗಳು ಎಂಬಂತೆ ಕಾಣಲಾಗುತ್ತಿತ್ತು. ಬದಲಾದ ಸನ್ನಿವೇಶದಲ್ಲಿ, ಇತ್ತೀಚಿನ ದಶಕಗಳಲ್ಲಿ ಹಿಂದುತ್ವದ ಬಗ್ಗೆ ಜನರಿಗೆ ಸತ್ಯದ ದರ್ಶನವಾಗುತ್ತಿದೆ. ಹಿಂದುತ್ವ ಎನ್ನುವುದು ನಮ್ಮ ಜೀವನ ವಿಧಾನವಾಗಿದ್ದು, ಇದಕ್ಕೆ ಯಾವುದೇ ನಿರ್ದಿಷ್ಟ ಚೌಕಟ್ಟಿಲ್ಲ. ಎಲ್ಲ, ಜಾತಿ, ಧರ್ಮ, ಲಿಂಗದವರನ್ನು ಇದು ಒಳಗೊಳ್ಳಲಿದೆ. ಅದೇ, ‘ಹಿಂದೂಯಿಸಂ’ ಎನ್ನುವುದು ಸಿದ್ಧಾಂತ ಸೇರಿ ವಿವಿಧ ಚೌಕಟ್ಟುಗಳನ್ನು ಒಳಗೊಳ್ಳಲಿದೆ. ಹಿಂದುತ್ವದ ಬಗೆಗಿನ ತಪ್ಪು ಕಲ್ಪನೆಗಳಿಂದಲೇ ಅದನ್ನು ಸಂಕುಚಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ರಾಮ್ ಮಾಧವ್ ವಿವರಿಸಿದರು.
‘ಹಿಂದುತ್ವ ಎನ್ನುವುದು ಉಗ್ರವಾದವೂ ಅಲ್ಲ, ಪ್ರತ್ಯೇಕವಾದವೂ ಅಲ್ಲ. ಇದು ಮುಕ್ತ ಮತ್ತು ಅಂತರ್ಗತವಾಗಿದೆ. ತತ್ವಶಾಸ್ತ್ರ ಮತ್ತು ಸಿದ್ಧಾಂತಗಳ ನಡುವೆ ವ್ಯತ್ಯಾಸವಿದ್ದು, ಹಿಂದುತ್ವವು ಯಾವುದೇ ಸಿದ್ಧಾಂತವನ್ನು ಪ್ರತಿಪಾದಿಸುತ್ತಿಲ್ಲ. ಬದಲಾಗಿ, ಇಲ್ಲಿನ ಶ್ರೀಮಂತ ತತ್ವಶಾಸ್ತ್ರದ ಸಾರವನ್ನು ಎಲ್ಲರಿಗೂ ಉಣಬಡಿಸಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.