ADVERTISEMENT

ನೀರಾವರಿ ಕ್ಷೇತ್ರಕ್ಕೆ ದೇವೇಗೌಡರ ಕೊಡುಗೆ ಅನನ್ಯ: ಸುಗತ ಶ್ರೀನಿವಾಸರಾಜು

ನವೀನ ಕುಮಾರ್ ಜಿ.
Published 18 ಡಿಸೆಂಬರ್ 2021, 20:35 IST
Last Updated 18 ಡಿಸೆಂಬರ್ 2021, 20:35 IST
ಸುಗತ ಶ್ರೀನಿವಾಸರಾಜು
ಸುಗತ ಶ್ರೀನಿವಾಸರಾಜು   

ಬೆಂಗಳೂರು: ‘ದೂರದೃಷ್ಟಿ ಹಾಗೂ ಅಭಿವೃದ್ಧಿಯ ಕಲ್ಪನೆಯೊಂದಿಗೆ ರಾಜಕೀಯ ಕ್ಷೇತ್ರ ಪ್ರವೇಶಿಸಿದ ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ನೀರಾವರಿ ಯೋಜನೆಗಳಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜೀವನ ಚರಿತ್ರೆ ‘ಫರೋಸ್ ಇನ್ ಎ ಫೀಲ್ಡ್’ ಕೃತಿಯ ಲೇಖಕರೂ ಆಗಿರುವ ಅವರು ಕೃತಿಯ ಕುರಿತ ಸಂವಾದದಲ್ಲಿ ಮಾತನಾಡಿದರು.

‘ಕಾವೇರಿಗಿಂತಲೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಗೌಡರ ಯೋಗದಾನವನ್ನು ಯಾರೂ ಮರೆಯುವಂತಿಲ್ಲ. ಈ ಯೋಜನೆಯ ಪುನರ್ವಸತಿಗಾಗಿ ಅವರು ಕೈಗೊಂಡಿರುವ ಕ್ರಮಗಳು ದಕ್ಷಿಣ ಏಷ್ಯಾದ ದೇಶಗಳಿಗೆ ಮಾದರಿಯಾಗಿವೆ. ಗುಜರಾತ್‌ನ ನರ್ಮದಾ ನದಿ ಯೋಜನೆಯ ಶ್ರೇಯಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪಡೆದುಕೊಂಡರೂ ಈ ಯೋಜನೆಯ ಅಣೆಕಟ್ಟನ್ನು ಎತ್ತರಿಸುವ ಕಲ್ಪನೆ ದೇವೇಗೌಡರದ್ದು’ ಎಂದರು.

ADVERTISEMENT

‘ಈಶಾನ್ಯ ರಾಜ್ಯಗಳು, ಪಂಜಾಬ್ ಮತ್ತು ಕಾಶ್ಮೀರದ ಅಭಿವೃದ್ಧಿಗೂ ಗೌಡರು ಪ್ರಧಾನಿಯಾಗಿದ್ದಾಗ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರು, 'ಕಾಶ್ಮೀರದ ಜನರು ನಂಬಿದ್ದ ಏಕೈಕ ಪ್ರಧಾನಿ ದೇವೇಗೌಡರು’ ಎಂದು ಹೇಳಿದ್ದು ಈ ಕಾರಣಕ್ಕಾಗಿಯೇ’ ಎಂಬುದನ್ನೂ ಸುಗತ ಅವರು ಸ್ಮರಿಸಿದರು.

‘ಹಲವಾರು ಅಭಿವೃದ್ಧಿ ಯೋಜನೆಗಳನ್ನು ತಂದಿದ್ದರೂ ಗೌಡರು ಅವುಗಳ ಪ್ರಚಾರಕ್ಕಾಗಿ ಚಿಕ್ಕಾಸನ್ನೂ ಖರ್ಚು ಮಾಡಿದವರಲ್ಲ. ಅವರನ್ನು ಕೇವಲ ಒಂದು ಜಾತಿಯ ನಾಯಕನಂತೆ ಚಿತ್ರಿಸುತ್ತಿರುವುದು ವಿಪರ್ಯಾಸ’ ಎಂದರು.ಲೇಖಕ ಕಾರ್ತಿಕ್ ವೆಂಕಟೇಶ್, ಪತ್ರಕರ್ತ ವಿಕಾರ್ ಅಹಮ್ಮದ್ ಸಯೀದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.