ADVERTISEMENT

ಬೆಂಗಳೂರು | ಕಡಿಮೆ ಬೆಲೆಗೆ ಚಿನ್ನದ ಆಮಿಷ: ಮಹಿಳೆಗೆ ವಂಚನೆ

ನಾಲ್ವರ ವಿರುದ್ದ ಸಿಸಿಬಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2025, 23:30 IST
Last Updated 2 ಮಾರ್ಚ್ 2025, 23:30 IST
ಚಿನ್ನ
ಚಿನ್ನ   

ಬೆಂಗಳೂರು: ಮಹಿಳೆಯೊಬ್ಬರಿಗೆ ₹4,000ಕ್ಕೆ 1 ಗ್ರಾಂ. ಚಿನ್ನ ಕೊಡುವುದಾಗಿ ನಂಬಿಸಿ ₹1 ಕೋಟಿ ಪಡೆದು ವಂಚನೆ ಮಾಡಿದ ಆರೋಪದ ಮೇರೆಗೆ ನಾಲ್ವರ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಾಯಿ ಬಡಾವಣೆ ನಿವಾಸಿ ಅಮರಾವತಿ ಅವರ ದೂರಿನ ಮೇರೆಗೆ ಎಂ.ಕೆ.ಗೋಪಾಲ ಕೃಷ್ಣ, ರಾಕೇಶ್ ರೆಡ್ಡಿ, ಯಶವಂತ್ ಕುಮಾರ್ ಮತ್ತು ರೂಪಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

‘ಕಳೆದ ವರ್ಷ ಮಾರ್ಚ್‌ನಲ್ಲಿ ಅಮರಾವತಿ ಅವರು ತಮ್ಮ ಮನೆಯಲ್ಲಿ ಶಾಂತಿ ಪೂಜೆ ಮಾಡಿಸಲು ಗೋಪಾಲಕೃಷ್ಣ ಅವರನ್ನು ಕರೆಸಿದ್ದರು. ಆಗ ರಾಕೇಶ್ ರೆಡ್ಡಿ ಎಂಬಾತ ಅಮರಾವತಿ ಅವರ ಮನೆಗೆ ಬಂದು ಗೋಪಾಲಕೃಷ್ಣಗೆ ನಮಸ್ಕರಿಸಿ, ‘ನಿಮ್ಮ ಪೂಜೆಯ ಫಲದಿಂದ ಶ್ರೀಮಂತನಾಗಿದ್ದೇನೆ ಎಂದು ಹೇಳಿ 15 ಚಿನ್ನದ ಬಿಸ್ಕೆಟ್ ಕೊಟ್ಟಿದ್ದ. ಕಷ್ಟದಲ್ಲಿರುವ ಅಮರಾವತಿಗೆ ಸಹಾಯ ಮಾಡುವಂತೆ ರಾಕೇಶ್‌ಗೆ ಗೋಪಾಲಕೃಷ್ಣ ಹೇಳಿದ್ದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಕೆಲ ದಿನದ ಬಳಿಕ ಸ್ನೇಹಿತನ ಜತೆ ಮಹಿಳೆಯ ಮನೆಗೆ ಬಂದ ರಾಕೇಶ್ ರೆಡ್ಡಿ, ‘ನಾವು ಚಿನ್ನದ ವ್ಯವಹಾರ ಮಾಡುತ್ತಿದ್ದೇವೆ. ಇದರಿಂದ ₹ 100 ಕೋಟಿ ಸಂಪಾದನೆ ಮಾಡಿದ್ದು, ಕೆ.ಜಿ.ಗಟ್ಟಲೇ ಚಿನ್ನ ದೊರೆಯುತ್ತದೆ. ಪ್ರತಿ ಗ್ರಾಂ ಚಿನ್ನವನ್ನು ₹4 ಸಾವಿರಕ್ಕೆ ಮಾರಾಟ ಮಾಡುತ್ತಿದ್ದೇವೆ. ಈ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ ಎಂದು ನಂಬಿಸಿದ್ದರು’ ಎಂದು ಹೇಳಿದರು.

‘ವಂಚಕರ ಮಾತು ನಂಬಿದ್ದ ಸಂತ್ರಸ್ತೆ ಹಂತ ಹಂತವಾಗಿ ₹60 ಲಕ್ಷ ಹೂಡಿಕೆ ಮಾಡಿದ್ದರು. ಇದೇ ರೀತಿ ಸಂತ್ರಸ್ತೆಯ ಸಂಬಂಧಿಕರಿಂದ ವಂಚಕರು ಹಂತ ಹಂತವಾಗಿ ₹1 ಕೋಟಿ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಪಡೆದುಕೊಂಡಿರುವ ಹಣಕ್ಕೆ ಚಿನ್ನ ನೀಡುವಂತೆ ಕೇಳಿದಾಗ, ‘ಕಸ್ಟಮ್ಸ್ ಅಧಿಕಾರಿಗಳು ಚಿನ್ನ ಜಪ್ತಿ ಮಾಡಿದ್ದಾರೆ’ ಎಂದು ಆರೋಪಿಗಳಾದ ಗೋಪಾಲಕೃಷ್ಣ, ರಾಕೇಶ್ ರೆಡ್ಡಿ ನೆಪ ಹೇಳುತ್ತಿದ್ದರು ಎಂದು ದೂರಿನಲ್ಲಿ ಅಮರಾವತಿ ಆರೋಪಿಸಿದ್ದಾರೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.