ಬೆಂಗಳೂರು: ಬ್ಯಾಂಕಿನಿಂದ ಸಾಲ ಕೊಡಿಸುವುದಾಗಿ ಮಹಿಳೆಯೊಬ್ಬರಿಗೆ ಮೊಬೈಲ್ನಲ್ಲಿ ಸಂದೇಶ ಕಳುಹಿಸಿ ಪರಿಚಯಿಸಿಕೊಂಡ ವಂಚಕರು, ₹3 ಲಕ್ಷ ಪಡೆದು ವಂಚಿಸಿದ ಪ್ರಕರಣ ಬಯಲಿಗೆ ಬಂದಿದೆ.
ಕೇರಳದ ತಿರುವನಂತಪುರದ ಸುಮಾ ವಂಚನೆಗೆ ಒಳಗಾದ ಮಹಿಳೆ. ಈ ಸಂಬಂಧ ಅವರು, ಅರವಿಂದ್ ಎಂಬಾತ ಸೇರಿ ಐದು ಮಂದಿಯ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಯ ಸ್ನೇಹಿತೆಯ ಮೊಬೈಲ್ಗೆ, ‘ಬ್ಯಾಂಕ್ನಿಂದ ಸಾಲ ಕೊಡಿಸುತ್ತೇವೆ’ ಎಂಬ ಸಂದೇಶ ಎರಡು ತಿಂಗಳ ಹಿಂದೆ ಬಂದಿತ್ತು. ಸ್ನೇಹಿತೆಯಿಂದ ನಂಬರ್ ಪಡೆದು ಸಂದೇಶ ಕಳುಹಿಸಿದ್ದ ವ್ಯಕ್ತಿಯನ್ನು ಸುಮಾ ಸಂಪರ್ಕಿಸಿದ್ದರು. ಈ ವೇಳೆ ಮಾತನಾಡಿದ್ದ ವ್ಯಕ್ತಿಯೊಬ್ಬ, ಅರವಿಂದ್ ಎಂಬುವನ ನಂಬರ್ ಕೊಟ್ಟು ಆತನನ್ನು ವಿಚಾರಿಸುವಂತೆ ತಿಳಿಸಿದ್ದ.
ಅರವಿಂದ್ಗೆ ಕರೆ ಮಾಡಿ ಸಾಲದ ಬಗ್ಗೆ ವಿಚಾರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಅರವಿಂದ್, ‘ಬ್ಯಾಂಕಿನಿಂದ ₹ 25 ಲಕ್ಷ ಸಾಲ ಕೊಡಿಸುತ್ತೇನೆ. ಇದಕ್ಕೆ ಕಮಿಷನ್ ಸೇರಿ ಒಟ್ಟು ₹1.87 ಲಕ್ಷ ಖರ್ಚಾಗುತ್ತದೆ’ ಎಂದಿದ್ದ. ಆತನ ಮಾತಿಗೆ ಒಪ್ಪಿದ ಸುಮಾ, ತಮಗೆ ಮತ್ತು ಸಂಬಂಧಿಕರೊಬ್ಬರಿಗೆ ತಲಾ ₹ 25 ಲಕ್ಷ ಕೊಡಿಸುವಂತೆ’ ಹೇಳಿದ್ದರು. ಕೆಲವು ದಾಖಲೆಗಳನ್ನು ಪಡೆದುಕೊಂಡ ಬಳಿಕ ಸುಮಾ ಅವರಿಗೆ ಕರೆ ಮಾಡಿದ್ದ ಅರವಿಂದ್, ‘ನಿಮಗೆ ಸಾಲ ಮಂಜೂರಾಗಿದೆ. ಬೆಂಗಳೂರಿಗೆ ಬನ್ನಿ’ ಎಂದು ಹೇಳಿದ್ದ.
ಆತನ ಮಾತು ನಂಬಿ ಸುಮಾ, ಎಂ.ಜಿ. ರಸ್ತೆಯಲ್ಲಿರುವ ಕಾಫಿ ಡೇ ಗೆ ಇತ್ತೀಚೆಗೆ ಬಂದಿದ್ದರು. ಅಲ್ಲಿಗೆ ಬಂದಿದ್ದ ಅರವಿಂದ್ ಕೆಲಹೊತ್ತು ಸುಮಾ ಮತ್ತು ಆಕೆಯ ಸಂಬಂಧಿಕರೊಬ್ಬರ ಜತೆ ವ್ಯವಹಾರದ ಬಗ್ಗೆ ಮಾತನಾಡಿದ್ದ. ಸಾಲ ಮಂಜೂರಾಗಿರುವುದಕ್ಕೆ ₹3 ಲಕ್ಷ ಕಮಿಷನ್ ಪಡೆದುಕೊಂಡು ಹೋಗಿದ್ದಾನೆ. ಆದರೆ, ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ, ಸುಮಾ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.