ಆಹ್ವಾನ
ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ಕಿರು ಹೊತ್ತಿಗೆ ಬರವಣಿಗೆಗೆ ಲೇಖಕರಿಂದ ಅರ್ಜಿ ಆಹ್ವಾನಿಸಿದೆ.
ಸಮುದಾಯದ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯ ವಿವಿಧ ಆಯಾಮಗಳನ್ನು ದಾಖಲಿಸಲು ಅಕಾಡೆಮಿ ಉದ್ದೇಶಿಸಿದೆ. ಯೋಜನೆಯ ಭಾಗವಾಗಿ ವಿಭಿನ್ನ ವಿಷಯಗಳಿಗೆ ಸಂಬಂಧಿಸಿದ ಕನಿಷ್ಠ 25 ಪುಟಗಳ 100 ಕೃತಿಗಳನ್ನು ಪ್ರಕಟಿಸಲು ನಿರ್ಧರಿಸಿದೆ. ಆರಂಭಿಕ ಹಂತದಲ್ಲಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ 50 ಕಿರು ಹೊತ್ತಿಗೆಗಳ ರಚನೆಗಾಗಿ ಲೇಖಕರನ್ನು ಆಯ್ಕೆ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ತಿಳಿಸಿದ್ದಾರೆ.
ಯೋಜನೆಯ ಅಡಿಯಲ್ಲಿ ಲೇಖಕರು ಬಂಜಾರ ಕಲಾ ಪರಂಪರೆ, ಬಂಜಾರ ಭಾಷೆ ಮತ್ತು ಸಾಹಿತ್ಯ, ಬಂಜಾರ ಜನಜೀವನ ಮತ್ತು ಸಂಪ್ರದಾಯಗಳು, ಆಚರಣೆಗಳು, ಹಬ್ಬಗಳು, ಬಂಜಾರ ಸಮುದಾಯದ ಹಿರಿಯ ಸಾಧಕರು, ಸಾಹಿತಿಗಳು, ಕಲಾವಿದರು ಹಾಗೂ ತಜ್ಞರು, ರಾಷ್ಟ್ರ-ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತರು, ಬಂಜಾರ ಹೋರಾಟಗಾರರು ಮತ್ತು ಪ್ರಮುಖ ಸಾಮಾಜಿಕ, ಸಾಂಸ್ಕೃತಿಕ ಮುಖಂಡರು, ಬಂಜಾರ ಪ್ರಮುಖ ಶ್ರದ್ಧಾ ಕೇಂದ್ರಗಳು, ಬಂಜಾರ ಐತಿಹಾಸಿಕ ತಾಣಗಳು, ಬಂಜಾರ ಸಮಾಜಶಾಸ್ತ್ರ, ಬಂಜಾರ ಶಿಕ್ಷಣ, ಬಂಜಾರ ನೃತ್ಯ, ಬಂಜಾರ ಸಂಗೀತ, ಬಂಜಾರ ನಾಟಕಗಳು ಹಾಗೂ ಪ್ರಯೋಗಗಳು ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಿರು ಹೊತ್ತಿಗೆ ರಚಿಸಬಹುದು ಎಂದಿದ್ದಾರೆ.
ಆಸಕ್ತ ಲೇಖಕರು ಕೃತಿಗಳ ಶೀರ್ಷಿಕೆ, ಸಾರಾಂಶ, ಸ್ವವಿವರಗಳನ್ನು ಜುಲೈ 19ರೊಳಗೆ ಅಕಾಡೆಮಿ ಕಚೇರಿಗೆ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಯುವ ಬಂಜಾರ ಸಂಶೋಧಕರಿಗೆ ಆದ್ಯತೆ ನೀಡಲಾಗುವುದು. ಲೇಖಕರಿಗೆ ನಿಯಮಾನುಸಾರ ಗೌರವ ಸಂಭಾವನೆ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.
ಅಂಚೆ ಮೂಲಕ ‘ರಿಜಿಸ್ಟ್ರಾರ್, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಕನ್ನಡ ಭವನ, 1ನೇ ಮಹಡಿ, ಜೆ.ಸಿ ರಸ್ತೆ, ಬೆಂಗಳೂರು-560002’ ವಿಳಾಸಕ್ಕೆ ಕಳುಹಿಸಬೇಕು. ವಿವರಕ್ಕೆ: 080 29917745.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.