ಬೆಂಗಳೂರು: ‘ಬಂಜಾರ ಸಂಸ್ಕೃತಿ, ಆಚರಣೆ, ಸಾಹಿತ್ಯ, ಜೀವನ ವಿಧಾನ ಸೇರಿ ಸಮಗ್ರ ಮಾಹಿತಿ ಒಳಗೊಂಡ ಬಂಜಾರ ವಿಶ್ವಕೋಶವನ್ನು ರಚಿಸಲಾಗುವುದು. ಮುಂದಿನ ವರ್ಷ ಬಂಜಾರ ವಿಶ್ವ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ’ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ತಿಳಿಸಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವಕೋಶ ರಚನೆ ಸಂಬಂಧ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ನಾಗಣ್ಣ, ಶ್ರೀದೇವಿ, ಸಣ್ಣರಾಮ ಹಾಗೂ ಕಾ.ತ.ಚಿಕ್ಕಣ್ಣ ಅವರನ್ನು ಒಳಗೊಂಡ ಸಲಹಾ ಸಮಿತಿ ರಚಿಸಲಾಗಿದೆ. ಈಗಾಗಲೇ ಈ ಸಲಹಾ ಸಮಿತಿಯು ಒಂದು ಸಭೆ ನಡೆಸಿದೆ. ಬೃಹತ್ ವಿಶ್ವಕೋಶ ಹೊರತರಲು ಅಂದಾಜು ₹ 8 ಕೋಟಿ ಅಗತ್ಯವಿದೆ. ಇದು ಐದು ವರ್ಷಗಳ ಯೋಜನೆ ಆಗಿದೆ. ಇದಕ್ಕೆ ಅಗತ್ಯ ಅನುದಾನ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಹೇಳಿದರು.
‘ಈ ವರ್ಷ ರಾಜ್ಯ ಮಟ್ಟದ ಬಂಜಾರ ಸಂಸ್ಕೃತಿ ಉತ್ಸವ ನಡೆಸಲಾಗುವುದು. ಮುಂದಿನ ವರ್ಷ ಬಂಜಾರ ವಿಶ್ವ ಸಮ್ಮೇಳನ ಆಯೋಜಿಸಲು ಮುಂದಾಗಿದ್ದೇವೆ. ಇದಕ್ಕೆ ಹೆಚ್ಚಿನ ಅನುದಾನ ಅಗತ್ಯವಿದೆ. ಈ ಬಾರಿಯ ಬಜೆಟ್ನಲ್ಲಿ ₹ 2.40 ಕೋಟಿ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಬಂಜಾರ ಡಿಜಿಟಲ್ ಪದಕೋಶ ಹೊರತರಲು ಕೂಡ ಯೋಜನೆ ರೂಪಿಸಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.