ADVERTISEMENT

ನಾಟಕ ರಚನಾ ತರಬೇತಿ: ‘ಬಂಜಾರ ಬದುಕಿನ ಅರಿವು ಮೂಡಿಸಿದ ಕಮ್ಮಟ‘

ಬಂಜಾರ ಸಾಹಿತ್ಯ, ಕಾವ್ಯ ಮತ್ತು ನಾಟಕ ರಚನಾ ತರಬೇತಿ ಸಮಾರೋಪ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 14:18 IST
Last Updated 9 ಜುಲೈ 2025, 14:18 IST
ಕಮ್ಮಟದಲ್ಲಿ ‘ಬಂಜಾರ ಬದುಕು ಬವಣೆ’ ನಾಟಕ ಪ್ರದರ್ಶಿಸಿದ ಶಿಬಿರಾರ್ಥಿಗಳು
ಕಮ್ಮಟದಲ್ಲಿ ‘ಬಂಜಾರ ಬದುಕು ಬವಣೆ’ ನಾಟಕ ಪ್ರದರ್ಶಿಸಿದ ಶಿಬಿರಾರ್ಥಿಗಳು   

ಬೆಂಗಳೂರು: ‘ಇಪ್ಪತ್ತು ದಿನಗಳ ಕಾಲ ನಡೆದ ಬಂಜಾರ ಸಾಹಿತ್ಯ, ಕಾವ್ಯ ಮತ್ತು ನಾಟಕ ರಚನಾ ತರಬೇತಿ ಕಮ್ಮಟದಲ್ಲಿ ಶಿಬಿರಾರ್ಥಿಗಳಿಗೆ ಬಂಜಾರ ಸಮುದಾಯದ ಬದುಕು, ಬವಣೆ ಕುರಿತು ನಾಟಕ, ಕಾವ್ಯ, ಲೇಖನಗಳ ಮೂಲಕ ಅರಿವು ಮೂಡಿಸಲಾಯಿತು’ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದ ಸ್ವಾಮಿ ಹೇಳಿದರು.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಅಗರ ಸಾಹಿತ್ಯ ಸಂಸ್ಕೃತಿ ವೇದಿಕೆ ಮತ್ತು ಪ್ರಜಾಕಿರಣ ಸೇವಾ ಚಾರಿಟಬಲ್ ಟ್ರಸ್ಟ್‌ ಆಶ್ರಮದ ಸಹಯೋಗದಲ್ಲಿ ಆಯೋಜಿಸಿದ್ದ ‘ಬಂಜಾರ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನಾ ಕಮ್ಮಟದ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಂಜಾರ ಸಮುದಾಯ ಆರ್ಥಿಕವಾಗಿ ಹಿಂದುಳಿದಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಸಿವು ನೀಗಿಸಿಕೊಳ್ಳಲು ಮಕ್ಕಳನ್ನು ಮಾರಿಕೊಂಡ ಪ್ರಕರಣಗಳೂ ವರದಿಯಾಗಿವೆ. ಇಂಥ ಹಲವು ವಿಚಾರಗಳ ಕುರಿತು ಕಮ್ಮಟದಲ್ಲಿ ಚಲನ ಜಿ.ನಾಯಕ್ ಅವರು ರಚಿಸಿದ್ದ ‘ಬಂಜಾರ ಬದುಕು ಬವಣೆ’ ನಾಟಕವನ್ನು ಪ್ರದರ್ಶಿಸಲಾಯಿತು’ ಎಂದರು.

ADVERTISEMENT

ಕವಿ ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ‘ಸಣ್ಣ ಮಕ್ಕಳು ದೊಡ್ಡ ದೊಡ್ಡ ಸಂಭಾಷಣೆಗಳನ್ನು ನೆನಪಿನಲ್ಲಿಟ್ಟುಕೊಂಡು ನುರಿತ ಕಲಾವಿದರಂತೆ ನಾಟಕದಲ್ಲಿ ಅಭಿನಯಿಸಿದರು. ಅವರ ಶ್ರದ್ಧೆ, ನಟನೆ ಬಹಳ ಸೊಗಸಾಗಿತ್ತು’ ಎಂದು ಮಕ್ಕಳ ಕಲಾ ಕೌಶಲವನ್ನು ಪ್ರಶಂಸಿಸಿದರು.

ಇಪತ್ತು ದಿನಗಳ ಕಮ್ಮಟದಲ್ಲಿ ಎರಡು ನಾಟಕಗಳು, ಹಲವು ಕಾವ್ಯ ಮತ್ತು ಲೇಖನಗಳನ್ನು ಶಿಬಿರಾರ್ಥಿಗಳು ಬರೆದರು.

ಅಗರದ ಸಾಹಿತ್ಯ ಸಂಸ್ಕೃತಿ ವೇದಿಕೆ ಅಧ್ಯಕ್ಷ ಆರ್. ಸದಾಶಿವಯ್ಯ ಜರಗನಹಳ್ಳಿ ಮಾತನಾಡಿದರು. ಪ್ರಜಾಕಿರಣ ಸೇವಾ ಚಾರಿಟಬಲ್ ಟ್ರಸ್‌ ಅಧ್ಯಕ್ಷ ರಾಹುಲ್ ಗಾಳಿ, ಛಾಯಾ ಭಾರ್ಗವಿ, ಎಸ್‌.ಎಚ್‌.ಮಾಲತೇಶ್ ಬಡಿಗೇರ್ ಮತ್ತಿತರರು ಕಮ್ಮಟದಲ್ಲಿ ಭಾಗವಹಿಸಿದ್ದರು. ಬಂಜಾರ ಅಕಾಡೆಮಿ ಸದಸ್ಯರಾದ ಉತ್ತಮ್, ಗಿರೀಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.