ಬೆಂಗಳೂರು: ‘ಡಿಮ್ಯಾಂಡ್ ಡ್ರಾಫ್ಟ್ (ಡಿ.ಡಿ) ಸೇರಿದಂತೆ ಬ್ಯಾಂಕುಗಳಲ್ಲಿ ಗ್ರಾಹಕರಿಗೆ ನೀಡುವ ಸೇವೆಗಳ ಬಗ್ಗೆ ದೇಶದ ಎಲ್ಲ ಶೆಡ್ಯೂಲ್ ಹಾಗೂ ವಾಣಿಜ್ಯ ಬ್ಯಾಂಕುಗಳಿಗೆ ಅನ್ವಯವಾಗುವಂತೆ 2015ರಲ್ಲಿ ಮಾಸ್ಟರ್ ಸರ್ಕ್ಯುಲರ್ ಹೊರಡಿಸಲಾಗಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೈಕೋರ್ಟ್ಗೆ ತಿಳಿಸಿದೆ.
ಈ ಕುರಿತಂತೆ ವಕೀಲ ಎಲ್. ರಮೇಶ್ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾ ಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಲೇವಾರಿ ಮಾಡಿದೆ. ವಿಚಾರಣೆ ವೇಳೆ ಆರ್ಬಿಐ ಪರ ವಕೀಲರು ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿ, ‘ಬ್ಯಾಂಕಿನ ಸೇವೆಗಳ ಕುರಿತಂತೆ ಆರ್ಬಿಐ 2015ರ ಜುಲೈ 1ರಂದು ಮಾಸ್ಟರ್ ಸರ್ಕ್ಯುಲರ್ ಹೊರಡಿಸಿದೆ. ಇದರಲ್ಲಿ ಉಲ್ಲೇಖಿಸಿರುವ ಸೇವೆಗಳನ್ನು ಒದಗಿಸಲು ನಿರಾಕರಿಸಿದರೆ, ದೂರು ನೀಡುವುದಕ್ಕೆ ಓಂಬುಡನ್ಸ್ಮನ್ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ನಿರ್ದಿಷ್ಟ ಬ್ಯಾಂಕಿನ ವಿರುದ್ಧ ದೂರುಗಳಿದ್ದರೆ ಅದಕ್ಕೆ ಸೀಮಿತವಾಗಿ ಪರಿಹಾರ ಪಡೆಯುವ ಅವಕಾಶವನ್ನು ಅರ್ಜಿದಾರಿಗೆ ಮುಕ್ತವಾಗಿಡಲಾಗಿದೆ’ ಎಂದು ತಿಳಿಸಿ ಅರ್ಜಿ ವಿಲೇವಾರಿ ಮಾಡಿದೆ.
‘ಸಾರ್ವಜನಿಕ ವಲಯದ ಎಲ್ಲ ಬ್ಯಾಂಕುಗಳಿಗೆ ₹ 50 ಸಾವಿರ ಒಳಗಿನ ಮೊತ್ತದ ಡಿ.ಡಿಗೆ ನಗದು ಸ್ವೀಕರಿಸುವಂತೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.