ADVERTISEMENT

₹ 7.90 ಕೋಟಿ ದುರುಪಯೋಗ; ಮಾಜಿ ಸಿಇಒ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 16:05 IST
Last Updated 9 ನವೆಂಬರ್ 2020, 16:05 IST

ಬೆಂಗಳೂರು: ಟಿ.ದಾಸರಹಳ್ಳಿಯ ಬೆಳ್ಳಿ ಬೆಳಕು ಸೌಹಾರ್ದ ಸಹಕಾರಿ ಬ್ಯಾಂಕ್‌ನ ₹ 7.90 ಕೋಟಿ ದುರುಪಯೋಗ ಪ್ರಕರಣದ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಹಣ ದುರುಪಯೋಗ ಬಗ್ಗೆ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಶರಣ್‌ಗೌಡ ಪಾಟೀಲ ದೂರು ನೀಡಿದ್ದಾರೆ. ಸಹಕಾರಿ ಬ್ಯಾಂಕ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಬಿ.ಡಿ. ಯೋಗಾನಂದ್, ಅವರ ಪತ್ನಿ ಅನ್ನಪೂರ್ಣ, ಮಲ್ಲಿಕಾರ್ಜುನಯ್ಯ ಸೇರಿ 22 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘2015-16ನೇ ಸಾಲಿನಿಂದ 2019-2020ರ ವರೆಗೆ ಯೋಗಾನಂದ್ ಸಿಇಒ ಆಗಿದ್ದರು. ಪತ್ನಿ ಅನ್ನಪೂರ್ಣ ಅಧ್ಯಕ್ಷರಾಗಿದ್ದರು. ಉಳಿದ ಆರೋಪಿಗಳು ಸದಸ್ಯರಾಗಿದ್ದರು. ಇದೇ ಅವಧಿಯಲ್ಲಿ ಯೋಗಾನಂದ್, ₹ 7.90 ಕೋಟಿ ಸಾಲ ಪಡೆದಿದ್ದರು. ಆದರೆ, ಸಾಲದ ಹಣಕ್ಕೆ ಈವರೆಗೂ ಬಡ್ಡಿ ಲೆಕ್ಕ ಸೇರಿಸಿಲ್ಲ. ಪ್ರಸ್ತುತ ಆಡಳಿತ ಮಂಡಳಿಯ ಸದಸ್ಯರು ಸಾಲ ವಸೂಲಾತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಯೋಗಾನಂದ ವೈಯಕ್ತಿಕ ವ್ಯವಹಾರಕ್ಕೆ ಅಧಿಕಾರ ದುರುಪಯೋಗಪಡಿಸಿಕೊಂಡು, ಠೇವಣಿದಾರರ ಶೇ 90 ಹಣ ಪಡೆದುಕೊಂಡಿದ್ದಾರೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ತಿಳಿಸಿದರು.

ADVERTISEMENT

‘ಹಲವು ಠೇವಣಿದಾರರಿಗೆ ಹಣ ಹಿಂತಿರುಗಿಸದಿರುವ ಬಗ್ಗೆ ದೂರುಗಳು ಬಂದಿದ್ದವು. ಅವುಗಳ ಆಧಾರದಲ್ಲಿ ರಾಜ್ಯ ಸೌಹಾರ್ದ ಸಹಕಾರಿ ಜಿಲ್ಲಾ ಸಂಯೋಜಕ ಅನಿಲ್ ಕುಮಾರ್ ಅವರು ‍ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಅದೇ ವರದಿ ಉಲ್ಲೇಖಿಸಿ ಶರಣ್‌ಗೌಡ ದೂರು ನೀಡಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.