ADVERTISEMENT

ಬಸವನಗುಡಿಯಲ್ಲಿ ಕಾಮಗಾರಿ ಅರ್ಧಕ್ಕೇ ಸ್ಥಗಿತ: ಸೊಪ್ಪಿನ ಬೀಜ ಬಿತ್ತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 19:33 IST
Last Updated 11 ಮಾರ್ಚ್ 2023, 19:33 IST
   

ಬೆಂಗಳೂರು: ಬಸವನಗುಡಿಯ ಅನೇಕ ಸ್ಥಳಗಳಲ್ಲಿ ಕಾಮಗಾರಿ ಆರಂಭಿಸಿ, ಅರ್ಧಕ್ಕೇ ಸ್ಥಗಿತಗೊಳಿಸಲಾಗಿದೆ. ಇದರಿಂದ ಮಣ್ಣಿನ ರಾಶಿಯಿಂದ ರಸ್ತೆಗಳು ತುಂಬಿವೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಕಾರ್ಯಕರ್ತರು, ಅದೇ ಸ್ಥಳದಲ್ಲಿ ಸೊಪ್ಪಿನ ಬೀಜ ಬಿತ್ತಿ ವಿನೂತನವಾಗಿ ಪ್ರತಿಭಟಿಸಿದರು.

‘ಮಣ್ಣಿನ ರಾಶಿಯ ಮೇಲೆ ಸಾರ್ವಜನಿಕರು ತರಕಾರಿ ಬೆಳೆದು ತಿನ್ನಲಿ ಎಂದು ಶಾಸಕರು, ಸಂಸದರು ಬಯಸಿರಬೇಕು. ಆ ಕಾರಣಕ್ಕೆ ಶ್ರೀನಗರದ ರಸ್ತೆಯಲ್ಲಿ ಮೆಂತೆ ಸೊಪ್ಪಿನ ಬೀಜವನ್ನು ಹಾಕಲಾಗಿದೆ. ಸೊಪ್ಪು ಬೆಳೆದ ನಂತರ ಅದನ್ನು ಶಾಸಕರು, ಸಂಸದರ ಮನೆಗೆ ಕಳುಹಿಸಲಾಗುವುದು’ ಎಂದು ಕಾಂಗ್ರೆಸ್ ವಕ್ತಾರ ಡಾ.ಶಂಕರ್ ಗುಹಾ ದ್ವಾರಕಾನಾಥ್ ಹೇಳಿದರು.

‘ಇಷ್ಟು ದಿನಗಳ ಕಾಲ ಸುಮ್ಮನಿದ್ದು ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲೆಂದರಲ್ಲಿ ರಸ್ತೆ ರಿಪೇರಿ, ಚರಂಡಿ ರಿಪೇರಿ ಹಾಗೂ ನಾನಾ ರೀತಿಯ ಕಾಮಗಾರಿ ಪ್ರಾರಂಭಿಸಲಾಗಿದೆ. ಯಾವ ಕೆಲಸವೂ ಸಕಾಲದಲ್ಲಿ ಪೂರ್ಣಗೊಳ್ಳುತ್ತಿಲ್ಲ. ರಸ್ತೆಗಳನ್ನು ಅಗೆದು ತಿಂಗಳಾನುಗಟ್ಟಲೆ ಆದರೂ ಕೆಲಸ ಪೂರ್ಣಗೊಳ್ಳುತ್ತಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

ADVERTISEMENT

‘ನಾಗರಿಕರು ಮನೆಗಳಿಗೆ ಹೋಗಲು ಮನೆ ಬಾಗಿಲಿನಲ್ಲಿ ಗುಂಡಿ, ಕಲ್ಲಿನ ರಾಶಿ, ಮಣ್ಣಿನ ರಾಶಿಯನ್ನು ದಾಟಿ ಹೋಗಬೇಕಾಗಿದೆ. ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಬೇಕಾಗಿದೆ. ಈ ರೀತಿ ಅವ್ಯವಸ್ಥೆಯಿದ್ದರೂ ಮಣ್ಣಿನ ರಾಶಿ ತೆರವು ಮಾಡುತ್ತಿಲ್ಲ’ ಎಂದು ಆರೋಪಿಸಿದರು.

‘ಡಬಲ್ ಎಂಜಿನ್‌ ಸರ್ಕಾರ ಜನರಿಗೆ ಡಬಲ್ ತೊಂದರೆ ಕೊಡುತ್ತಿದೆ. ಶಾಸಕ ರವಿ ಸುಬ್ರಮಣ್ಯ ಮತ್ತು ಅವರ ಅಣ್ಣನ ಮಗ ಸಂಸದ ತೇಜಸ್ವಿ ಸೂರ್ಯ ಅವರ ಡಬಲ್ ಎಂಜಿನ್‌ ಅಧಿಕಾರವು ಜನರನ್ನು ಸಾಕಷ್ಟು ಸಂಕಷ್ಟಗಳಿಗೆ ತಳ್ಳುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.