ಬೆಂಗಳೂರು: ‘ಚಾತುರ್ವರ್ಣ ವ್ಯವಸ್ಥೆಯಲ್ಲಿ ಕಾಯಕಜೀವಿಗಳನ್ನು ತುಂಬಾ ಕೀಳಾಗಿ ನೋಡಲಾಗುತ್ತಿತ್ತು. ಆಳುವ ವರ್ಗದಿಂದ ವಂಚನೆ ಮತ್ತು ಕಿರುಕುಳ ಅನುಭವಿಸುತ್ತಿದ್ದ ಶ್ರಮಜೀವಿಗಳಿಗೆ ಘನತೆ ತಂದುಕೊಟ್ಟವರು ಬಸವಣ್ಣ’ ಎಂದು ಪ್ರಾಧ್ಯಾಪಕ ರುದ್ರೇಶ್ ಅದರಂಗಿ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬುಧವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಮತ್ತು ಕಾಯಕ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ಜೀವಿಗಳ ಸಂಕಷ್ಟಕ್ಕೆ ಧ್ವನಿಯಾದರು. ವಿವಿಧ ಕಸುಬುಗಳನ್ನು ಮಾಡುತ್ತಿದ್ದ ಕಾಯಕ ಜೀವಿಗಳನ್ನು ಒಟ್ಟುಗೂಡಿಸಿದ್ದರು. ಅನುಭವ ಮಂಟಪದಲ್ಲಿ ಸಮಾನವಾಗಿ ಕುಳಿತುಕೊಂಡು ಅವರೊಂದಿಗೆ ಚರ್ಚಿಸುತ್ತಿದ್ದರು. ಬಸವಣ್ಣನವರು ಕಾಯಕಕ್ಕೆ ತಕ್ಕಂತೆ ಘನತೆ, ಶ್ರಮಿಕರಲ್ಲಿ ಆತ್ಮವಿಶ್ವಾಸ ತಂದುಕೊಟ್ಟವರು. ವಿಶ್ವದ ಮೊದಲ ಕಾರ್ಮಿಕ ದಿನಾಚರಣೆ 12ನೇ ಶತಮಾನದಲ್ಲಿ ನಡೆದ ವಚನ ಚಳವಳಿಯಾಗಿದೆ’ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್, ‘ಶರಣರು ಜಗತ್ತಿಗೆ ಕಾಯಕ ಸಿದ್ಧಾಂತವನ್ನು ಬೋಧಿಸುವ ಜೊತೆಗೆ ಶ್ರಮ ಸಂಸ್ಕೃತಿ ಪ್ರತಿಪಾದಿಸಿದರು. 12ನೇ ಶತಮಾನದಲ್ಲಿ ಜಡ್ಡುಗಟ್ಟಿದ ಸಮಾಜದ ಕೊಳೆಯನ್ನು ಕ್ರಾಂತಿಕಾರಕ ಚಿಂತನೆಗಳ ಮೂಲಕ ತೊಳೆದರು. ಬಸವಣ್ಣನವರ ನೇತೃತ್ವದಲ್ಲಿ ಶರಣರು ವೈಚಾರಿಕ ಬೀಜ ಬಿತ್ತಿದರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.