ADVERTISEMENT

ಶ್ರಮಜೀವಿಗಳಿಗೆ ಘನತೆ ತಂದುಕೊಟ್ಟ ಬಸವಣ್ಣ: ರುದ್ರೇಶ್ ಅದರಂಗಿ

​ಪ್ರಜಾವಾಣಿ ವಾರ್ತೆ
Published 2 ಮೇ 2024, 21:43 IST
Last Updated 2 ಮೇ 2024, 21:43 IST
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ದತ್ತಿ ಉಪನ್ಯಾಸ ಮತ್ತು ಕಾಯಕ ದಿನಾಚರಣೆಯಲ್ಲಿ ಸಿ. ಸೋಮಶೇಖರ್, ಪರಿಷತ್ತಿನ ಕಾರ್ಯದರ್ಶಿ ಸೋಮಶೇಖರ ಗಾಂಜಿ, ಉಪನ್ಯಾಸಕ ರುದ್ರೇಶ್ ಅದರಂಗಿ, ದತ್ತಿದಾನಿ ಭಾರತಿ ಪಾಟೀಲ್, ಬಸವನಗುಡಿ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲೆ ವೈ.ಸಿ. ಕಮಲಾ, ಗೀತಾ ಜಯಂತ್ ಭಾಗವಹಿಸಿದ್ದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ದತ್ತಿ ಉಪನ್ಯಾಸ ಮತ್ತು ಕಾಯಕ ದಿನಾಚರಣೆಯಲ್ಲಿ ಸಿ. ಸೋಮಶೇಖರ್, ಪರಿಷತ್ತಿನ ಕಾರ್ಯದರ್ಶಿ ಸೋಮಶೇಖರ ಗಾಂಜಿ, ಉಪನ್ಯಾಸಕ ರುದ್ರೇಶ್ ಅದರಂಗಿ, ದತ್ತಿದಾನಿ ಭಾರತಿ ಪಾಟೀಲ್, ಬಸವನಗುಡಿ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲೆ ವೈ.ಸಿ. ಕಮಲಾ, ಗೀತಾ ಜಯಂತ್ ಭಾಗವಹಿಸಿದ್ದರು.   

ಬೆಂಗಳೂರು: ‘ಚಾತುರ್ವರ್ಣ ವ್ಯವಸ್ಥೆಯಲ್ಲಿ ಕಾಯಕಜೀವಿಗಳನ್ನು ತುಂಬಾ ಕೀಳಾಗಿ ನೋಡಲಾಗುತ್ತಿತ್ತು. ಆಳುವ ವರ್ಗದಿಂದ ವಂಚನೆ ಮತ್ತು ಕಿರುಕುಳ ಅನುಭವಿಸುತ್ತಿದ್ದ ಶ್ರಮಜೀವಿಗಳಿಗೆ ಘನತೆ ತಂದುಕೊಟ್ಟವರು ಬಸವಣ್ಣ’ ಎಂದು ಪ್ರಾಧ್ಯಾಪಕ ರುದ್ರೇಶ್ ಅದರಂಗಿ ಹೇಳಿದರು. 

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬುಧವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಮತ್ತು ಕಾಯಕ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ಜೀವಿಗಳ ಸಂಕಷ್ಟಕ್ಕೆ ಧ್ವನಿಯಾದರು. ವಿವಿಧ ಕಸುಬುಗಳನ್ನು ಮಾಡುತ್ತಿದ್ದ ಕಾಯಕ ಜೀವಿಗಳನ್ನು ಒಟ್ಟುಗೂಡಿಸಿದ್ದರು. ಅನುಭವ ಮಂಟಪದಲ್ಲಿ ಸಮಾನವಾಗಿ ಕುಳಿತುಕೊಂಡು ಅವರೊಂದಿಗೆ ಚರ್ಚಿಸುತ್ತಿದ್ದರು. ಬಸವಣ್ಣನವರು ಕಾಯಕಕ್ಕೆ ತಕ್ಕಂತೆ ಘನತೆ, ಶ್ರಮಿಕರಲ್ಲಿ ಆತ್ಮವಿಶ್ವಾಸ ತಂದುಕೊಟ್ಟವರು. ವಿಶ್ವದ ಮೊದಲ ಕಾರ್ಮಿಕ ದಿನಾಚರಣೆ 12ನೇ ಶತಮಾನದಲ್ಲಿ ನಡೆದ ವಚನ ಚಳವಳಿಯಾಗಿದೆ’ ಎಂದರು.

ADVERTISEMENT

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್, ‘ಶರಣರು ಜಗತ್ತಿಗೆ ಕಾಯಕ ಸಿದ್ಧಾಂತವನ್ನು ಬೋಧಿಸುವ ಜೊತೆಗೆ ಶ್ರಮ ಸಂಸ್ಕೃತಿ ಪ್ರತಿಪಾದಿಸಿದರು. 12ನೇ ಶತಮಾನದಲ್ಲಿ ಜಡ್ಡುಗಟ್ಟಿದ ಸಮಾಜದ ಕೊಳೆಯನ್ನು ಕ್ರಾಂತಿಕಾರಕ ಚಿಂತನೆಗಳ ಮೂಲಕ ತೊಳೆದರು. ಬಸವಣ್ಣನವರ ನೇತೃತ್ವದಲ್ಲಿ ಶರಣರು ವೈಚಾರಿಕ ಬೀಜ ಬಿತ್ತಿದರು’  ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.