ಸಂಗ್ರಹ ಚಿತ್ರ ( ಸಾಂದರ್ಬಿಕ ಚಿತ್ರ)
ರಾಜರಾಜೇಶ್ವರಿನಗರ: ನಗರದ ಹೊರವಲಯದ ವರಹಾಸಂದ್ರದಲ್ಲಿ ಸೋಮವಾರ ಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ 18 ನೇ ವರ್ಷದ ಕಡಲೆಕಾಯಿ ಪರಿಷೆ, ಸಂಕ್ರಾಂತಿ ಉತ್ಸವ ಹಾಗೂ ಬಸವೇಶ್ವರಸ್ವಾಮಿ ದೇವರ ರಥೋತ್ಸವ ನಡೆಯಲಿದೆ.
ಮುಂಜಾನೆ 6 ಗಂಟೆಯಿಂದ ರಾತ್ರಿ 8ರವರೆಗೂ ವಿವಿಧ ಸಾಂಸ್ಕೃತಿಕ ಉತ್ಸವಗಳು ನಡೆಯಲಿವೆ.
ಬಸವೇಶ್ವರ ಸ್ವಾಮಿ ದೇವಸ್ಥಾನ ಸಮಿತಿ, ಕಾಳಮ್ಮ ಮಲ್ಲೇಶಯ್ಯ ಫೌಂಡೇಷನ್, ಎಂ.ರುದ್ರೇಶ್ ಸ್ನೇಹಿತರ ಸಮೂಹ ಮತ್ತು 32 ಗ್ರಾಮಗಳ ಗ್ರಾಮಸ್ಥರ ಸಹಯೋಗದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.
ಬಸವನಗುಡಿ ಕಡಲೆಕಾಯಿ ಪರಿಷೆ ಮಾದರಿಯಲ್ಲೇ ಇಲ್ಲಿಯೂ ಕಡಲೆಕಾಯಿ ಪರಿಷೆ ನಡೆಯಲಿದೆ. ರಥೋತ್ಸವಕ್ಕೆ ಬರುವ ಪ್ರತಿ ಭಕ್ತರಿಗೆ ತಲಾ ಎರಡು ಸೇರು ಕಡಲೆಕಾಯಿ, ಒಂದು ಜಲ್ಲೆ ಕಬ್ಬನ್ನು ಉಚಿತವಾಗಿ ವಿತರಿಸಲಾಗುವುದು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ರುದ್ರೇಶ್ ತಿಳಿಸಿದ್ದಾರೆ.
ಜಾತ್ರೆ, ಉತ್ಸವ, ಹಬ್ಬಗಳಿಂದ ಮನುಷ್ಯರ ನಡುವಿನ ಸಂಬಂಧ ಗಟ್ಟಿಗೊಳ್ಳಲು ಸಹಾಯವಾಗುತ್ತದೆ. ನಮ್ಮ ಪೂರ್ವಿಕರ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಜಾತ್ರೆ, ಉತ್ಸವಗಳನ್ನು ಯುವಜನಾಂಗಕ್ಕೆ ತಿಳಿಸುವುದಕ್ಕಾಗಿ ಕಡಲೆಕಾಯಿ ಪರಿಷೆ, ಸಂಕ್ರಾಂತಿ ಉತ್ಸವ, ಜಾತ್ರಾ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.