ADVERTISEMENT

ಅಶ್ವಾರೂಢ ಬಸವೇಶ್ವರರ ನವೀಕೃತ ಪ್ರತಿಮೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 10:18 IST
Last Updated 26 ಆಗಸ್ಟ್ 2020, 10:18 IST
ಅಶ್ವಾರೂಢ ಬಸವೇಶ್ವರರ ನವೀಕೃತ ಪ್ರತಿಮೆ
ಅಶ್ವಾರೂಢ ಬಸವೇಶ್ವರರ ನವೀಕೃತ ಪ್ರತಿಮೆ   

ಬೆಂಗಳೂರು: ಬಸವೇಶ್ವರ ವೃತ್ತದಲ್ಲಿನ ಅಶ್ವಾರೂಢ ಬಸವೇಶ್ವರ ಪ್ರತಿಮೆಯನ್ನು ಬಿಬಿಎಂಪಿ ಮರುವಿನ್ಯಾಸಗೊಳಿಸಿ ನವೀಕರಣಗೊಳಿಸಿದ್ದು, ಅದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಲೋಕಾರ್ಪಣೆಗೊಳಿಸಿದರು.

ಬಸವೇಶ್ವರ ವೃತ್ತದಲ್ಲಿ ಅಶ್ವಾರೂಢ ಬಸವಣ್ಣನವರ ಕಂಚಿನ ಪ್ರತಿಮೆಯನ್ನು 1994ರ ಆ.26ರಂದು ಅನಾವರಣಗೊಳಿಸಲಾಗಿತ್ತು. ಅದರ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಈಗಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಪ್ರತಿಮೆಯ ಸುತ್ತಲೂ ಅನುಭವ ಮಂಟಪ, ಬಸವಣ್ಣನ ವಚನಗಳ ಸಾರಗಳನ್ನು ಸಾರುವ ರಚನೆಯನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತು. 2019–20ನೇ ಸಾಲಿನಲ್ಲಿಗಂಗಾಂಬಿಕೆ ಅವರು ಮೇಯರ್‌ ಆಗಿದ್ದಾಗ ಈ ಕಾಮಗಾರಿಗೆ ₹ 1.50 ಕೋಟಿ ಮಂಜೂರು ಮಾಡಿದ್ದರು.

ಹೊಸತೇನಿವೆ?

ADVERTISEMENT

ನವೀಕೃತ ಪ್ರತಿಮೆಯ ಹಿಂಭಾಗದಲ್ಲಿ ಹೊಸದಾಗಿ ಅರ್ಧಚಂದ್ರಾಕೃತಿಯ ಕಾಂಕ್ರೀಟ್‌ ಗೋಡೆ ಮತ್ತು ಚಾಲುಕ್ಯ ಶೈಲಿಯ ಸ್ಯಾಂಡ್ ಸ್ಟೋನ್ ಶಿಲಾಸ್ತಂಬಗಳನ್ನು ನಿರ್ಮಿಸಲಾಗಿದೆ. ಕಾಂಕ್ರೀಟ್‌ ಪೀಠ ನಿರ್ಮಿಸಿ ಅದರ ಮೇಲೆ ಪ್ರತಿಮೆಯನ್ನು ಮರುಸ್ಥಾಪನೆ ಮಾಡಲಾಗಿದೆ.

ಹಿನ್ನೆಲೆ ಗೋಡೆಯ ಮೇಲೆ ಬಸವಣ್ಣನವರ ‘ಅನುಭವ ಮಂಟಪ’, ‘ಸಮಾನತೆಯ ಬೀಜಾಂಕುರ’, ‘ದಯೆಯಿಲ್ಲದ ಧರ್ಮವಾವುದಯ್ಯಾ’, ‘ಎಳೆಹೂಟೆ’ ಶಿಕ್ಷೆ ಮತ್ತು ‘ಕಾಯಕವೇ ಕೈಲಾಸ’ ವಚನಗಳ ಸಾರಗಳನ್ನು ಬಿಂಬಿಸುವ ವಿಶೇಷ ಕಲಾಕೃತಿಗಳು ಹಾಗೂ ಭಿತ್ತಿಚಿತ್ರಗಳನ್ನು ಅಳವಡಿಸಲಾಗಿದೆ.

ಈ ಕಂಚಿನ ಪ್ರತಿಮೆ ಅನಾವರಣಗೊಂಡ ಬೆಳ್ಳಿ ಮಹೋತ್ಸವದ ಸಂಸ್ಮರಣಾರ್ಥ ಪ್ರತಿಮೆಗೆ ಬೆಳ್ಳಿ ಬಣ್ಣದ ಲೇಪನ ಮಾಡಲಾಗಿದೆ. ಅತ್ಯಾಧುನಿಕ ಹಾಗೂ ಸ್ವಯಂಚಾಲಿತ ವರ್ಣರಂಜಿತ ಬೆಳಕಿನ ವ್ಯವಸ್ಥೆ ಮತ್ತು ಲಘು ಸಂಗೀತ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಮೆಯ ಸುತ್ತ ಕಿರು ಉದ್ಯಾನ ನಿರ್ಮಿಸಲಾಗಿದೆ. ಪ್ರತಿಮೆಯ ಆವರಣದ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿದೆ.

ಬಸವಣ್ಣ ಅವರ ಮಹತ್ಕಾರ್ಯಗಳನ್ನು ಬಿಂಬಿಸುವ ಬರಹವಿರುವ ಭಿತ್ತಿಫಲಕವನ್ನು ಅಳವಡಿಸಲಾಗಿದೆ.

ಮೇಯರ್‌ ಎಂ.ಗೌತಮ್‌ ಕುಮಾರ್‌, ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಚಿವ ವಿ.ಸೋಮಣ್ಣ, ಶಾಸಕ ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.