ಬಸವಣ್ಣ
ಯಲಹಂಕ: ಸಮಾನತೆ, ಭ್ರಾತೃತ್ವ, ದಯೆ, ಪರೋಪಕಾರ ಮತ್ತಿತರ ಮಾನವೀಯ ಮೌಲ್ಯಗಳು ಹಾಗೂ ಧರ್ಮವನ್ನು ಈ ನಾಡಿನಲ್ಲಿ ಪುನರ್ ಸ್ಥಾಪಿಸಿದ ಮಹಾನ್ ಮಾನವತಾವಾದಿ ಬಸವಣ್ಣನವರು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹಾಗೂ ಸಮನ್ವಯ ಸಮಿತಿಯ ಆಶ್ರಯದಲ್ಲಿ ಉಪನಗರದ ನಿಸರ್ಗ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೇಷ್ಟ ಜೀವನ ಮೌಲ್ಯಗಳೇ ಧಾರ್ಮಿಕ ಪರಂಪರೆಯ ರಕ್ಷಾಕವಚ ತೊಟ್ಟು ಬಲಿಷ್ಠವಾಗಿ ನಿಂತಿವೆ. ಧರ್ಮ, ತತ್ವ ಮತ್ತು ಪರಂಪರೆಯೇ ನಮ್ಮ ಶಕ್ತಿಯಾಗಿದ್ದು, ನಮ್ಮ ಅಸ್ಥಿತ್ವವೂ ಕೂಡ ಅದರ ಮೇಲೆ ಅವಲಂಬಿತವಾಗಿದೆ ಎನ್ನುವ ಎಚ್ಚರ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು ಎಂದು ತಿಳಿಸಿದರು.
ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಯಾವುದೇ ಜಾತಿ, ಧರ್ಮದ ಉಳಿವು ಮತ್ತು ಬೆಳವಣಿಗೆಗೆ ಒಗ್ಗಟ್ಟು ಮೂಲಮಂತ್ರವಾಗಿದೆ. ಇದನ್ನು ನಾವೆಲ್ಲರೂ ಅರ್ಥಮಾಡಿಕೊಂಡು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಮುನ್ನಡೆಯಬೇಕು‘ ಎಂದರು.
ವೀರಸಿಂಹಾಸನ ಮಹಾಸಂಸ್ಥಾನ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ರೇಣುಕಾಚಾರ್ಯ, ಬಿಬಿಎಂಪಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಅಖಿಲಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಯಲಹಂಕ ಘಟಕದ ಅಧ್ಯಕ್ಷೆ ಹೇಮಲತ ಚಿದಾನಂದ, ಮುಖಂಡರಾದ ಮರಿಸ್ವಾಮಿ, ಸಚ್ಚಿದಾನಂದಮೂರ್ತಿ, ಗುರುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಜಯಂತ್ಯುತ್ಸವದ ಪ್ರಯುಕ್ತ ಬಸವಣ್ಣ ಮತ್ತು ರೇಣುಕಾಚಾರ್ಯರ ಭಾವಚಿತ್ರವನ್ನು ಹೂವಿನ ಫಲ್ಲಕ್ಕಿಯಲ್ಲಿ ಇಟ್ಟು, ಯಲಹಂಕ ಹಳೇನಗರದಿಂದ ಉಪನಗರ, ಮದರ್ ಡೇರಿ ಕ್ರಾಸ್ ಮೂಲಕ ಕಾರ್ಯಕ್ರಮದ ವೇದಿಕೆಯವರೆಗೆ ಮೆರವಣಿಗೆ ನಡೆಸಲಾಯಿತು. ಮಹಿಳೆಯರಿಂದ ಪೂರ್ಣಕುಂಭ ಕಳಶ, ನಂದಿಧ್ವಜ, ವೀರಗಾಸೆ, ಬೊಂಬೆಕುಣಿತ ಮತ್ತಿತರ ಜಾನಪದ ಕಲಾತಂಡಗಳ ಪ್ರದರ್ಶನ, ಜನರ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.