ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸಿಲ್ಲ ಎಂದು ಸ್ಪಷ್ಟನೆ ನೀಡಿರುವ ಬಿಬಿಎಂಪಿ, ಬುಧವಾರ ತೆರವು ಕಾರ್ಯಾಚರಣೆ ನಡೆಸಿತು.
ಬೊಮ್ಮನಹಳ್ಳಿ ವಾರ್ಡ್ ವ್ಯಾಪ್ತಿಯ ಕೋಡಿಚಿಕ್ಕನಹಳ್ಳಿಯಲ್ಲಿನ ಜನಪ್ರಿಯ ಲೇಕ್ ವ್ಯೂ ಅಪಾರ್ಟ್ಮೆಂಟ್ ಸಮುಚ್ಚಯದ(1ನೇ ಹಂತ, ಎರಡನೇ ಗೇಟ್) ಬಳಿ ಎರಡು ಕಾಂಪೌಂಡ್ ತೆರವುಗೊಳಿಸಲಾಗಿದೆ. 11 ಅಡಿ ಅಗಲ ಹಾಗೂ 100 ಅಡಿ ಉದ್ದದಷ್ಟು ರಾಜಕಾಲುವೆ ಒತ್ತುವರಿಯಾಗಿತ್ತು. ಅದನ್ನು ತೆರವು ಮಾಡಲಾಯಿತು ಎಂದು ಬಿಬಿಎಂಪಿ ತಿಳಿಸಿದೆ.
ಖಾಲಿ ಜಾಗ ಹಾಗೂ ರಾಜಕಾಲುವೆ ಮೇಲೆ ನಿರ್ಮಿಸಿದ್ದ ರಸ್ತೆ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಗುರುವಾರವೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಿದೆ.
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಪಣತ್ತೂರು, ಹೂಡಿ, ದೊಡ್ಡನೆಕ್ಕುಂದಿ, ವರ್ತೂರು, ಕುಂದನಹಳ್ಳಿ, ಮುನ್ನೇಕೊಳಲು, ಕಸವನಹಳ್ಳಿ ಪ್ರದೇಶಗಳಲ್ಲಿ 5 ಸಾವಿರ ಮೀಟರ್ನಷ್ಟು ರಾಜಕಾಲುವೆ ಒತ್ತುವರಿಯಾಗಿದೆ. ಭೂಮಾಪಕರು ಸರ್ವೆ ನಡೆಸಿ ಒತ್ತುವರಿ ಗುರುತು ಮಾಡಿದ್ದಾರೆ. ಕೂಡಲೇ ತೆರವು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ವಲಯ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.