ಬೆಂಗಳೂರು: ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಕಚೇರಿಯ ನಗರ ಯೋಜನಾ ವಿಭಾಗದಲ್ಲಿ ಪ್ರಭಾರ ಸಹಾಯಕ ನಿರ್ದೇಶಕರಾಗಿದ್ದ ಎಸ್.ಎನ್ ದೇವೇಂದ್ರಪ್ಪ ಅವರನ್ನು ಬಿಬಿಎಂಪಿ ಅಮಾನತುಗೊಳಿಸಿದೆ.
ಕಟ್ಟಡವೊಂದಕ್ಕೆ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ನೀಡಲು ₹ 20 ಲಕ್ಷ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಅವರನ್ನು ಶುಕ್ರವಾರ (ಫೆ 5ರಂದು) ಬಂಧಿಸಿದ್ದರು. ಅವರ ಮನೆಯಲ್ಲಿ ಪಾಲಿಕೆಯ 480 ಕಡತಗಳು, ವಿವಿಧ ಅಧಿಕಾರಿಗಳ 80 ಸೀಲ್ಗಳು ಹಾಗೂ 120 ಲೀಟರ್ ದುಬಾರಿ ಬೆಲೆಯ ಮದ್ಯದ ದಾಸ್ತಾನು ಪತ್ತೆಯಾಗಿತ್ತು. ಬಿಬಿಎಂಪಿ ಮುಖ್ಯ ಎಂಜಿನಿಯರ್ಗಳು, ಕಾರ್ಯನಿರ್ವಾಹಕ ಎಂಜಿನಿಯರ್ಗಳು, ಸಹಾಯಕ ಎಂಜಿನಿಯರ್ಗಳು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಸೇರಿದ 80 ಮೊಹರುಗಳೂ (ಸೀಲ್) ಸಿಕ್ಕಿದ್ದವು.
ಪಾಲಿಕೆಯ ವ್ಯಾಪ್ತಿಯ ಪ್ರದೇಶದಲ್ಲಿ ಕಟ್ಟಡಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬೇರೆ ಅಧಿಕಾರಿಗಳ ಹೆಸರಿನಲ್ಲಿ ತಾನೇ ಸಹಿಮಾಡಿ ನಕ್ಷೆ ಮಂಜೂರಾತಿ ಮತ್ತು ಒ.ಸಿ ವಿತರಣೆ ಮಾಡುತ್ತಿದ್ದ ಆರೋಪವನ್ನು ದೇವೇಂದ್ರಪ್ಪ ಎದುರಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.