ADVERTISEMENT

ಲೋಕಾಯುಕ್ತ ಪೊಲೀಸರ ಸೋಗಿನಲ್ಲಿ ಬಿಬಿಎಂಪಿ ಎಇಇಗೆ ಬೆದರಿಕೆ ಸಂದೇಶ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 14:13 IST
Last Updated 23 ಜೂನ್ 2025, 14:13 IST
   

ಬೆಂಗಳೂರು: ಮಹದೇವಪುರ ವಲಯದ ಬಿಬಿಎಂಪಿ ಎಇಇ ಜ್ಯೋತಿ ಜಿ. ಚೌಲುರ್ಕರ್ ಅವರಿಗೆ ಲೋಕಾಯುಕ್ತ ಪೊಲೀಸರ ಸೋಗಿನಲ್ಲಿ ಬೆದರಿಕೆ ಹಾಕಿದ್ದು, ಅಪರಿಚಿತರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಜ್ಯೋತಿ ಅವರು ಲೋಕಾಯುಕ್ತ ಕಚೇರಿಗೆ ಹಾಜರಾಗಿ ಮಾಹಿತಿ ನೀಡಿದ್ದರು. ಅದನ್ನು ಆಧರಿಸಿ ಲೋಕಾಯುಕ್ತ ನಗರ ವಿಭಾಗದ ಇನ್‌ಸ್ಪೆಕ್ಟರ್‌ ಎಸ್‌.ಶ್ರೀಕಾಂತ್‌ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಎರಡು ಪ್ರತ್ಯೇಕ ಸಂಖ್ಯೆಗಳಿಂದ ಆರೋಪಿಗಳು, ಲೋಕಾಯುಕ್ತ ಎಸ್‌ಪಿ ಹಾಗೂ ಲೋಕಾಯುಕ್ತ ಎಡಿಜಿಪಿ ಎಂಬುದಾಗಿ ಜ್ಯೋತಿ ಅವರಿಗೆ ಸಂದೇಶ ಕಳುಹಿಸಿದ್ದರು. ನಂತರ, ತಮ್ಮ ಮೇಲೆ ಗೋಪ್ಯ ದೂರು ಬಂದಿದ್ದು, ಬಿ –ರಿಪೋರ್ಟ್‌ ಹಾಕುತ್ತೇವೆ. ಎಸ್‌ಪಿ ಅವರು ಹೇಳಿದಂತೆ ನಡೆದುಕೊಳ್ಳಿ ಎಂದು ಕರೆ ಮಾಡಿ ತಿಳಿಸಿದ್ದರು. ಅದೇ ರೀತಿ ನಿವೃತ್ತ ಕಾರ್ಯಪಾಲಕ ಎಂಜಿನಿಯರ್‌ ರಾಮಮೋಹನ್‌ ಅವರಿಗೂ ಬೆದರಿಕೆ ಕರೆ ಬಂದಿತ್ತು. ಟ್ರೂ ಕಾಲರ್‌ನಲ್ಲಿ ಪರಿಶೀಲನೆ ನಡೆಸಿದಾಗ, ಕರ್ನಾಟಕ ಲೋಕಾಯುಕ್ತ ಎಂದು ತೋರಿಸುತ್ತಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

'ಲೋಕಾಯುಕ್ತ ಪೊಲೀಸರ ಹೆಸರು ಬಳಸಿಕೊಂಡು ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಿದೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.