ADVERTISEMENT

ಕನಕಪುರ ರಸ್ತೆ ನಿವಾಸಿಗಳ ಬೇಡಿಕೆಗೆ ಮಣಿದ ಬಿಬಿಎಂಪಿ: ಪಾದಚಾರಿ ಮಾರ್ಗ ಶೀಘ್ರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 20:02 IST
Last Updated 4 ಜನವರಿ 2020, 20:02 IST
ಯಲಚೇನಹಳ್ಳಿಯಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದ ನಿವಾಸಿಗಳು
ಯಲಚೇನಹಳ್ಳಿಯಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದ ನಿವಾಸಿಗಳು   

ಬೆಂಗಳೂರು:ಕನಕಪುರ ರಸ್ತೆ ಬದಿಯಲ್ಲಿ ಬರುವ ಬಡಾವಣೆಗಳ ನಿವಾಸಿಗಳು ಮಾಡಿದ ಪ್ರತಿಭಟನೆಗೆ ಮಣಿದಿರುವ ಬಿಬಿಎಂಪಿ, ಇಲ್ಲಿ ಪಾದಚಾರಿ ಮಾರ್ಗ ನಿರ್ಮಿಸುವ ಭರವಸೆ ನೀಡಿದೆ.

ಕನಕಪುರ ರಸ್ತೆ ಅಪಾರ್ಟ್‌ಮೆಂಟ್‌ಗಳ ಒಕ್ಕೂಟವು ಶನಿವಾರ ಯಲಚೇನಹಳ್ಳಿಯಲ್ಲಿ ಈ ಕುರಿತು ಸಂವಾದ ಏರ್ಪಡಿಸಿತ್ತು. ನಿವಾಸಿಗಳ ದೂರುಗಳನ್ನು ಯಲಚೇನಹಳ್ಳಿ ವಾರ್ಡ್‌ ಸದಸ್ಯ ಬಾಲಕೃಷ್ಣ ಆಲಿಸಿದರು.

ಬಿಬಿಎಂಪಿ ಮುಖ್ಯರಸ್ತೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಮಹದೇಶ್, ‘ರಸ್ತೆಗಳ ಬದಿಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗುವುದು. ಕನಕಪುರ ರಸ್ತೆ, ಒಳಚರಂಡಿ ಹಾಗೂ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದ ಸಮಗ್ರ ಯೋಜನಾ ವರದಿಗೆ ಈಗಾಗಲೇ ಅನುಮೋದನೆ ಸಿಕ್ಕಿದೆ’ ಎಂದ ಅವರು, ‘ಯಲಚೇನಹಳ್ಳಿ ಮೆಟ್ರೊ ನಿಲ್ದಾಣದ ಎದುರು ಸಂಚಾರ ದಟ್ಟಣೆ ನಿಯಂತ್ರಿಸಲು, ಬಸ್‌ ನಿಲುಗಡೆ ತಾಣ ನಿರ್ಮಿಸಲಾಗುವುದು’ ಎಂದರು.

ADVERTISEMENT

ಇದೇ ಯೋಜನೆಯಡಿ ಕನಕಪುರ ರಸ್ತೆಯ ಬದಿಯಲ್ಲಿ ಸಸಿಗಳನ್ನು ನೆಡಲಾಗುವುದು ಎಂದು ತಿಳಿಸಿದರು.

ಕೆ.ಎಸ್. ಲೇಔಟ್‌ ಇನ್‌ಸ್ಪೆಕ್ಟರ್‌ (ಸಂಚಾರ) ಶ್ರೀನಿವಾಸ್, ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಮಯ್ಯ, ಬಿಬಿಎಂಪಿ ಆರೋಗ್ಯಾಧಿಕಾರಿ ಮಹೇಶ್ ಇದ್ದರು.150ಕ್ಕೂ ಹೆಚ್ಚು ನಿವಾಸಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.