ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಈಗ ಇಳಿಮುಖವಾಗಿದ್ದು, ಇನ್ನಷ್ಟು ಕಡಿಮೆ ಮಾಡಲು ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
‘ಲಾಕ್ಡೌನ್ ವಿಸ್ತರಣೆ ಮಾಡಿದ್ದರಿಂದ ಪ್ರಕರಣಗಳು ಇಳಿಮುಖ ಆಗಿರಬಹುದು. ಮತ್ತೆ ಲಾಕ್ಡೌನ್ ವಿಸ್ತರಣೆ ಮಾಡಬೇಕೇ, ಬೇಡವೇ ಎಂಬುದನ್ನು ತಜ್ಞರ ಸಮಿತಿ ವರದಿ ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಅದರ ಹೊರತಾಗಿ ಬಿಬಿಎಂಪಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಲಾಗುತ್ತಿದೆ’ ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಕೋವಿಡ್ ಪರೀಕ್ಷೆಯನ್ನು ಒತ್ತಾಯದಿಂದ ಯಾರಿಗೂ ಮಾಡಿಸುತ್ತಿಲ್ಲ. ಸೋಂಕು ಹರಡುವಿಕೆ ತಡೆಯಲು ಪರೀಕ್ಷೆಯನ್ನು ವ್ಯಾಪಕವಾಗಿ ಮಾಡಲಾಗುತ್ತಿದೆ. ಪರೀಕ್ಷೆ ಹೆಚ್ಚಾದಷ್ಟೂ ವಸ್ತುಸ್ಥಿತಿ ಸಮರ್ಪಕವಾಗಿ ಅರ್ಥವಾಗಲಿದೆ’ ಎಂದರು.
‘ಈವರೆಗೆ 25.73 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಪ್ರತಿದಿನ 45 ವರ್ಷ ಮೇಲ್ಪಟ್ಟ 25 ಸಾವಿರ ಜನರಿಗೆ, 18ರಿಂದ 44 ವರ್ಷದೊಳಗಿನ ಕೋವಿಡ್ ಮುಂಚೂಣಿ ಯೋಧರಿಗೆ ನೀಡಲಾಗುತ್ತಿದೆ. 45 ವರ್ಷ ಮೇಲ್ಪಟ್ಟವರು ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಲಸಿಕೆ ಪಡೆಯಬಹುದು. ಆಯ್ದ 20 ವರ್ಗದ ನೌಕರರಿಗೆ ಅಲ್ಲಲ್ಲೇ ವಿಶೇಷ ಶಿಬಿರಗಳನ್ನು ಏರ್ಪಡಿಸಿ ಲಸಿಕೆ ನೀಡಲಾಗುವುದು’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.