ADVERTISEMENT

ಪಾಲಿಕೆಯಿಂದ ನಕಲಿ ಬಿಲ್ ಹಗರಣ: ಶ್ವೇತಪತ್ರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 7:39 IST
Last Updated 18 ಅಕ್ಟೋಬರ್ 2020, 7:39 IST

ಬೆಂಗಳೂರು: ಪಾಲಿಕೆಯಿಂದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ₹1,500 ಕೋಟಿಗಳ ನಕಲಿ ಬಿಲ್ ಹಗರಣ ಕುರಿತು ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಆಯೋಗ ಸಲ್ಲಿಸಿರುವ ತನಿಖಾ ವರದಿ ಆಧರಿಸಿ, ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಆಗ್ರಹಿಸಿದೆ.

ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಎನ್.ಉಮೇಶ್, 'ರಾಜರಾಜೇಶ್ವರಿ ನಗರ, ಗಾಂಧಿನಗರ ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ 2008ರಿಂದ 2011ರ ಅವಧಿಯಲ್ಲಿ ನಡೆದಿರುವ ನಕಲಿ ಬಿಲ್‍ಗಳಿಂದ ಅಕ್ರಮ ನಡೆಸಿರುವ ಕುರಿತು 2018ರಲ್ಲೇ ಅಂದಿನ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರಿಗೆ ವರದಿ ಸಲ್ಲಿಕೆಯಾಗಿದೆ. ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯ ಅವರೂ ವರದಿ ನೀಡಿದ್ದರು' ಎಂದು ವಿವರಿಸಿದರು.

'ಅಂದು ಕಾಂಗ್ರೆಸ್‍ನಲ್ಲಿದ್ದು, ಇಂದು ರಾಜರಾಜೇಶ್ವರಿನಗರ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ಅವರ ಕಚೇರಿಯಲ್ಲಿ ಪಾಲಿಕೆಗೆ ಸಂಬಂಧಿಸಿದ ಹಲವು ಕಡತಗಳು ಪತ್ತೆಯಾಗಿದ್ದವು. ಬಿಜೆಪಿಯವರು ಈ ಹಗರಣದ ತನಿಖೆಗೆ ಒತ್ತಾಯಿಸಿದ್ದರು' ಎಂದು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್.ಪ್ರತಾಪ್ ಸಿಂಹ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.