ADVERTISEMENT

ತಪ್ಪು ಮರೆಮಾಚಲು ನಕಲಿ ಪ್ರಮಾಣ ಪತ್ರದ ಮೊರೆ

ಮೊದಲು ಮಂಜೂರಾದ ನಕ್ಷೆ ಉಲ್ಲಂಘನೆ: ಬಳಿಕ ಖೊಟ್ಟಿ ಸ್ವಾಧೀನಾನುಭವ ಪತ್ರದಿಂದ ತೇಪೆ

ವಿಜಯಕುಮಾರ್ ಸಿಗರನಹಳ್ಳಿ
Published 26 ಏಪ್ರಿಲ್ 2019, 19:54 IST
Last Updated 26 ಏಪ್ರಿಲ್ 2019, 19:54 IST
   

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ (ಬಿಬಿಎಂಪಿ) ಮಂಜೂರಾತಿ ನೀಡಿದ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುವವರಿಗೆ ನಕಲಿ ಸ್ವಾಧೀನಾನುಭವ ಪ್ರಮಾಣ ಪತ್ರ ವಿತರಿಸುವ ದಂಧೆಯೊಂದು ಸದ್ದಿಲ್ಲದೆ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಕಟ್ಟಡ ನಿರ್ಮಾಣಕ್ಕೂ ಮೊದಲು ಅದರ ನೀಲನಕ್ಷೆ ಸಿದ್ಧಪಡಿಸಿ ಬಿಬಿಎಂಪಿಯಿಂದ ಅನುಮೋದನೆ ಪಡೆಯುವುದು ಕೆಎಂಸಿ ಕಾಯ್ದೆಯ ನಿಯಮಾವಳಿ ಪ್ರಕಾರ ಕಡ್ಡಾಯ. ಬಿಬಿಎಂಪಿ ಮಂಜೂರು ಮಾಡಿದ ನಕ್ಷೆಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದವರು, ಆ ತಪ್ಪನ್ನು ಮರೆಮಾಚಲು ನಕಲಿ ಪ್ರಮಾಣ ಪತ್ರದ ಮೊರೆ ಹೋಗುತ್ತಾರೆ ಎಂದು ತಿಳಿದುಬಂದಿದೆ.

ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದ ಬಳಿಕ ಬಿಬಿಎಂಪಿ ಅಧಿಕಾರಿಗಳು ಪರಿಶೀಲಿಸಿ ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಬೇಕು. ಈ ಪ್ರಮಾಣ ಪತ್ರವನ್ನು ಆಧರಿಸಿಯೇ ಬೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸುತ್ತದೆ. ವಿದ್ಯುತ್ ಸಂಪರ್ಕ ಹಾಗೂ ಇತರ ಸೌಕರ್ಯ ಪಡೆಯಲು ಸ್ವಾಧೀನಾನುಭವ ಪ್ರಮಾಣಪತ್ರ ಬೇಕೇ ಬೇಕು.

ADVERTISEMENT

ನಕ್ಷೆ ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿದವರು ಬಿಬಿಎಂಪಿಯಿಂದ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯಲು ತಿಣುಕಾಡಬೇಕು. ಲಕ್ಷಗಟ್ಟಲೆ ರೂಪಾಯಿ ದಂಡ ಪಾವತಿಸಬೇಕು. ಇದರಿಂದ ತಪ್ಪಿಸಿಕೊಳ್ಳಲು ಕಟ್ಟಡಗಳ ಮಾಲೀಕರು ಈ ಅಡ್ಡದಾರಿ ಹಿಡಿದಿದ್ದಾರೆ ಎಂದು ಹೇಳಲಾಗಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೆಲವು ಕಟ್ಟಡಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಬಿಎಂಪಿ ಮತ್ತು ಬೆಸ್ಕಾಂನಿಂದ ಭ್ರಷ್ಟಾಚಾರ ನಿರ್ಮೂಲನ ಮತ್ತು ಭೂ ರಕ್ಷಣಾ ಸಮಿತಿ ಅಧ್ಯಕ್ಷ ಆರ್. ರಮೇಶ್ ಪಡೆದುಕೊಂಡಿದ್ದಾರೆ. ಇವುಗಳನ್ನು ಗಮನಿಸಿದರೆ ನಕಲಿ ಪ್ರಮಾಣ ಪತ್ರ ದಂಧೆ ನಡೆಯುತ್ತಿದೆ ಎಂಬ ಶಂಕೆ ಮೂಡುತ್ತಿದೆ.

ದಾಖಲೆಗಳ ಪ್ರಕಾರ, ಮಹದೇವಪುರ ವಲಯ ವ್ಯಾಪ್ತಿಯ ಬೆಳ್ಳಂದೂರಿನಲ್ಲಿ ಬೈಜು ರವೀಂದ್ರನ್ ಮತ್ತು ದಿವ್ಯಾ ಗೋಕುಲನಾಥ್‌, ಹರಳೂರಿನ ಎಚ್.ಆರ್. ಮೋಹನ್‌ಕುಮಾರ್, ಕಸವನಹಳ್ಳಿಯಲ್ಲಿ ರಾಜಶೇಖರರೆಡ್ಡಿ, ಭೂಪಾಲರೆಡ್ಡಿ ಎಂಬವರು ಕಟ್ಟಿರುವ ಕಟ್ಟಡಗಳಿಗೆ ಸಂಬಂಧಿಸಿದಂತೆ ಬೆಸ್ಕಾಂಗೆ ಸ್ವಾಧೀನಾನುಭ‌ವ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಪಾಲಿಕೆಯಿಂದ ವಿತರಿಸಿದೆ ಎನ್ನಲಾದ ಪ್ರಮಾಣ ಪತ್ರಗಳನ್ನು ಬೆಸ್ಕಾಂ, ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿದೆ.

ಆದರೆ, ಅದೇ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಒದಗಿಸಲಾಗಿದೆಯೇ ಎಂದು ರಮೇಶ್ ಬಿಬಿಎಂಪಿಯಿಂದ ಮಾಹಿತಿ ಕೇಳಿದ್ದು, ಮೇಲಿನ ಯಾರೊಬ್ಬರಿಗೂ ಈ ಪ್ರಮಾಣ ಪತ್ರ ನೀಡಿಲ್ಲ ಎಂದು ಬಿಬಿಎಂಪಿ ಹಿಂಬರಹ ನೀಡಿದೆ. ಹಾಗಿದ್ದರೆ ಬಿಬಿಎಂಪಿ ಹೆಸರಿನಲ್ಲಿರುವ ಪ್ರಮಾಣ ಪತ್ರಗಳು ಎಲ್ಲಿಂದ ಬಂದವು ಎಂಬುದು ಪ್ರಶ್ನೆಯಾಗಿದೆ.

‘ನಕಲಿ ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ವಿತರಣೆ ದಂಧೆಯಾಗಿ ಮಾರ್ಪಟ್ಟಿದೆ. ಇವುಗಳನ್ನು ತಯಾರಿಸಿಕೊಡುವ ಜಾಲವೇ ತಲೆ ಎತ್ತಿದೆ. ಇದಕ್ಕಾಗಿ ಏಜೆಂಟರುಗಳೂ ಇದ್ದಾರೆ, ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಪ್ರತಿ ಪ್ರಮಾಣ ಪತ್ರಕ್ಕೆ ₹2ರಿಂದ ₹3 ಲಕ್ಷ ನಡೆಯುತ್ತಿದೆ’ ಎಂದು ರಮೇಶ್ ದೂರುತ್ತಾರೆ.

ಮುಖ್ಯ ಕಾರ್ಯದರ್ಶಿಗೆ ದೂರು

‘ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಎಲ್ಲಾ ದಾಖಲೆಗಳ ಸಹಿತ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದೇನೆ’ ಎಂದು ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗುತ್ತಿದೆ. ಅಲ್ಲದೇ ಕಾಯ್ದೆ ಉಲ್ಲಂಘಿಸಿ ಕಟ್ಟಡಗಳು ನಿರ್ಮಾಣವಾಗುತ್ತಿವೆ ಎಂದು ವಿವರಿಸಿದ್ದೇನೆ. ತನಿಖೆ ನಡೆಸುವ ಭರವಸೆಯನ್ನು ಅವರು ನೀಡಿದ್ದಾರೆ’ ಎಂದರು.

**

ನಕಲಿ ಸ್ವಾಧೀನಾನುಭವ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಇಲ್ಲ. ದೂರು ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ
- ಮಹೇಂದ್ರ ಜೈನ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.