ADVERTISEMENT

ಬಿಬಿಎಂಪಿ ಜಂಟಿ ಆಯುಕ್ತರ ಆಪ್ತ ಸಹಾಯಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 21:32 IST
Last Updated 31 ಮಾರ್ಚ್ 2021, 21:32 IST
ರಾಕೇಶ್‌ಗೌಡ
ರಾಕೇಶ್‌ಗೌಡ   

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪೂರ್ವ ವಿಭಾಗದ ಜಂಟಿ ಆಯುಕ್ತರ ಆಪ್ತ ಸಹಾಯಕ ರಾಕೇಶ್ ಗೌಡ (33) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಟಿ.ನರಸೀಪುರದ ರಾಕೇಶ್ ಗೌಡ, 12 ವರ್ಷಗಳಿಂದ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬಸ್ಥರು ನೀಡಿರುವ ದೂರು ಆಧರಿಸಿ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಪತ್ನಿ ಹಾಗೂ ಮಕ್ಕಳ ಜೊತೆ ರಾಕೇಶ್ ಗೌಡ ವಿಜಯನಗರ ಬಳಿಯ ಮೂಡಲಪಾಳ್ಯದ ಮನೆಯಲ್ಲಿ ವಾಸವಿದ್ದರು. ಅಕ್ಕನ ಮಗಳು, ವಿದ್ಯಾಭ್ಯಾಸಕ್ಕಾಗಿ ಅವರ ಮನೆಯಲ್ಲೇ ಉಳಿದುಕೊಂಡಿದ್ದರು. ಇತ್ತೀಚೆಗೆ ಪತ್ನಿ ಹಾಗೂ ಮಕ್ಕಳು, ಸಂಬಂಧಿಕರ ಊರಿಗೆ ಹೋಗಿದ್ದರು. ಅಕ್ಕನ ಮಗಳು ಮಾತ್ರ ಮನೆಯಲ್ಲಿದ್ದರು.’

ADVERTISEMENT

‘ಮಂಗಳವಾರ ಕೆಲಸ ಮುಗಿಸಿ ಮನೆಗೆ ಬಂದು ಊಟ ಮಾಡಿ ಮಲಗಿದ್ದ ರಾಕೇಶ್, ಬುಧವಾರ ಮಧ್ಯಾಹ್ನ 12 ಗಂಟೆಯಾದರೂ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಒಳಗಿನಿಂದ ಲಾಕ್ ಮಾಡಿಕೊಂಡಿದ್ದರು. ಅಕ್ಕನ ಮಗಳು, ಬಾಗಿಲು ಬಡಿದರೂ ತೆಗೆದಿರಲಿಲ್ಲ. ಗಾಬರಿಗೊಂಡ ಆಕೆ, ಅಣ್ಣನನ್ನು ಮನೆಗೆ ಕರೆಸಿದ್ದಳು. ಇಬ್ಬರೂ ಬೀಗ ಮುರಿದುಬಾಗಿಲು ತೆಗೆದಿದಿದ್ದರು. ಫ್ಯಾನ್‌ಗೆ ರಾಕೇಶ್ ನೇಣು ಹಾಕಿಕೊಂಡಿದ್ದು ಕಂಡಿತ್ತು.’

‘ಉಸಿರಾಡುತ್ತಿರಬಹುದೆಂದು ತಿಳಿದಿದ್ದ ಅವರು, ಸ್ಥಳೀಯರ ನೆರವಿನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ರಾಕೇಶ್ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದೂ ಸಂಜೀವ್ ಪಾಟೀಲ ಮಾಹಿತಿ ನೀಡಿದರು.

‘ಯಾರ ಮೇಲೂ ಸಂಶಯವಿಲ್ಲವೆಂದು ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಸಾವಿಗೆ ನಿಖರ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದೂ ಅವರು ಹೇಳಿದರು.

‘ರಾಕೇಶ್ ಅವರು ವೈಯಕ್ತಿಕ ಸಮಸ್ಯೆಗಳನ್ನು ಹೊಂದಿದ್ದರು. ಅವರು ಸಾಕಿದ್ದ ನಾಯಿಯೊಂದು ಇತ್ತೀಚೆಗೆ ಸತ್ತಿತ್ತು. ಅದರ ಸಾವು ಅವರನ್ನು ಬಹಳವಾಗಿ ಕಾಡಿತ್ತು’ ಎಂದು ಅವರ ಸಹೋದ್ಯೋಗಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.