ADVERTISEMENT

ಬಿಬಿಎಂಪಿ: ರೈತರಿಗೆ ಸಾವಯವ ಗೊಬ್ಬರ ಉಚಿತ ವಿತರಣೆ

ಕಸ ಸಂಸ್ಕರಣಾ ಘಟಕಗಳಲ್ಲಿ 16 ಮಿ.ಮೀ ಹಾಗೂ 35 ಮಿ.ಮೀ ದಪ್ಪದ ಗೊಬ್ಬರ ಲಭ್ಯ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 21:05 IST
Last Updated 11 ಆಗಸ್ಟ್ 2020, 21:05 IST
   

ಬೆಂಗಳೂರು: ಬಿಬಿಎಂಪಿಯ ಏಳು ಕಸ ಸಂಸ್ಕರಣಾ ಘಟಕಗಳಲ್ಲಿನ ಉಪಉತ್ಪನ್ನವಾದ 16 ಮಿ.ಮಿ ದಪ್ಪದ ಹಾಗೂ 35 ಮಿ.ಮೀ ದಪ್ಪದ ಸಾವಯವ ಗೊಬ್ಬರವನ್ನು ರೈತರಿಗೆ ಉಚಿತವಾಗಿ ನೀಡಲು ಬಿಬಿಎಂಪಿ ಮುಂದಾಗಿದೆ.

ಪಾಲಿಕೆಯ ಕಸ ಸಂಸ್ಕರಣಾ ಘಟಕಗಳಲ್ಲಿ ಪ್ರತಿದಿನ ಸ್ವೀಕರಿಸುವ ವಿಂಗಡಿಸಿದ ಹಸಿಕಸವನ್ನು ವಿಂಡ್ರೋ ವಿಧಾನದಲ್ಲಿ ಸಂಸ್ಕರಿಸಲಾಗುತ್ತದೆ. ಇದನ್ನು 35 ಮಿ.ಮೀ ಹಾಗೂ 16 ಮಿ.ಮೀ ಅಳತೆಯ ಟ್ರೋಮೆಲ್‌ಗಳಲ್ಲಿ ಜರಡಿಯಾಡಿದಾಗ ಈ ಉಪ ಉತ್ಪನ್ನ ಲಭಿಸುತ್ತದೆ.

‘ಇದು ಎರಡನೇ ದರ್ಜೆಯ ಕಾಂಪೋಸ್ಟ್. ಇದನ್ನು ತೆಂಗು, ಅಡಿಕೆ, ಮಾವು, ಸೀಬೆ, ದಾಳಿಂಬೆ ಮತ್ತು ಇನ್ನಿತರೆ ತೋಟಗಾರಿಕೆ ಬೆಳೆಗಳಿಗೆ ಗೊಬ್ಬರವಾಗಿ ಬಳಸಬಹುದು. ಇದರ ಬಳಕೆಯಿಂದ ಉತ್ತಮವಾದ ಫಸಲು ಪಡೆಯುವುದರ ಜೊತೆಗೆ ನೆಲದ ಫಲವತ್ತತೆಯೂ ವೃದ್ಧಿಯಾಗುತ್ತದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ’ ಎಂದು ಎಂದು ಬಿಬಿಎಂಪಿ ಜಂಟಿ ಆಯುಕ್ತ (ಕಸ ನಿರ್ವಹಣೆ) ಸರ್ಫರಾಜ್‌ ಖಾನ್‌ ‘ಪ್ರಜಾವಾಣಿಗೆ ತಿಳಿಸಿದರು.

ADVERTISEMENT

ಹಸಿಕಸದಿಂದ ಶುದ್ಧ ಕಾಂಪೋಸ್ಟ್‌ (4 ಮಿ.ಮಿ.ದಪ್ಪದ ಸಾವಯವ ಗೊಬ್ಬರ) ಉತ್ಪಾದನೆಯಾಗುವ ಪ್ರಮಾಣ ಶೇ 10ರಷ್ಟು ಮಾತ್ರ. ಉಳಿದಂತೆ 16 ಮಿ.ಮೀ ದಪ್ಪದ ಹಾಗೂ 35 ಮಿ.ಮಿ. ದಪ್ಪದ ಎರಡನೇ ದರ್ಜೆಯ ಕಾಂಪೋಸ್ಟ್‌ ಉತ್ಪಾದನೆಯಾಗುತ್ತದೆ. 4 ಎಂ.ಎಂ. ದಪ್ಪದ ಕಾಂಪೋಸ್ಟನ್ನು ಪಾಲಿಕೆ ಮಾರಾಟ ಮಾಡುತ್ತದೆ. ಆದರೆ, ಎರಡನೇ ದರ್ಜೆಯ ಕಾಂಪೋಸ್ಟ್‌ಗೆ ಅಷ್ಟಾಗಿ ಬೇಡಿಕೆ ಇಲ್ಲ. ಕಸ ಸಂಸ್ಕರಣಾ ಘಟಕಗಳ ಬಳಿ ಇದನ್ನು ದಾಸ್ತಾನು ಮಾಡುವುದು ಕೂಡಾ ಬಿಬಿಎಂಪಿ ಪಾಲಿಗೆ ಸವಾಲಾಗಿದೆ.

‘ಅದನ್ನು ಕಸ ವಿಲೇವಾರಿ ಘಟಕಗಳಿಗೆ ಸುರಿದು ವ್ಯರ್ಥ ಮಾಡುವ ಬದಲು ರೈತರಿಗೆ ಉಚಿತವಾಗಿ ನೀಡಲು ನಿರ್ಧರಿಸಿದ್ದೇವೆ. ರೈತರು ನಮ್ಮ ಏಳು ಕಸ ಸಂಸ್ಕರಣಾ ಘಟಕಗಳಿಂದ ಇದನ್ನು ಟ್ರ್ಯಾಕ್ಟರ್ ಅಥವಾ ಲಾರಿಗಳಲ್ಲಿ ಇದನ್ನು ತುಂಬಿಕೊಂಡು ಹೋಗಬಹುದು’ ಎಂದು ಸರ್ಫರಾಜ್‌ ಖಾನ್‌ ತಿಳಿಸಿದರು.

‘ಕೋವಿಡ್‌ಗಿಂತ ಮುಂಚೆ ರೈತರು ಎರಡನೇ ದರ್ಜೆಯ ಸಾವಯವ ಗೊಬ್ಬರವನ್ನೂ ಕಡಿಮೆ ದರಕ್ಕೆ ಕೊಂಡೊಯ್ಯುತ್ತಿದ್ದರು. ಆದರೆ, ಕೋವಿಡ್‌ ಕಾಣಿಸಿಕೊಂಡ ಬಳಿಕ ಇದನ್ನು ಒಯ್ಯುವವರೇ ಇಲ್ಲ. ಇವುಗಳನ್ನು ವಿಲೇವಾರಿಯೂ ತಲೆನೋವಾಗಿದೆ. ಬೇರೆ ಜಿಲ್ಲೆಗಳಿಂದ ರೈತರು ಕೂಡಾ ಬಂದು ಇದನ್ನು ಒಯ್ಯಬಹುದು’ ಎಂದು ಕಸ ಸಂಸ್ಕರಣಾ ಘಟಕದ ವ್ಯವಸ್ಥಾಪಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.