ಬೆಂಗಳೂರು: ಬಿಬಿಎಂಪಿ ಅಧಿಕಾರಿ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕಾರಿ ಸಮಿತಿಗೆ ಸೆ.3ರಂದು ಚುನಾವಣೆ ನಡೆಯಲಿದೆ.
ನಾಮಪತ್ರ ವಾಪಸ್ ಪಡೆಯವ ಅವಧಿ ಮುಗಿದ ನಂತರ ಎನ್. ಜೆನಿಫರ್ ಫೆಬಿನಾ ಹಾಗೂ ಕುಮಾರಿ ಅವರು ಕಣದಿಂದ ಹಿಂದೆ ಸರಿದಿದ್ದಾರೆ. ಸಂಘದ ಪ್ರಸ್ತುತ ಅಧ್ಯಕ್ಷ ಅಮೃತ್ ರಾಜ್ ನೇತೃತದ ತಂಡಕ್ಕೆ ಬೆಂಬಲ ಘೋಷಿಸಿದ್ದಾರೆ. ಹೀಗಾಗಿ ಅಂತಿಮವಾಗಿ 33 ಅಭ್ಯರ್ಥಿಗಳು ಉಳಿದಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಡಾ. ರಾಜ್ಕುಮಾರ್ ಗಾಜಿನ ಮನೆಯಲ್ಲಿ ಭಾನುವಾರ ಮತದಾನ ನಡೆಯಲಿದೆ. ಸಂಜೆ ಫಲಿತಾಂಶ ಪ್ರಕಟವಾಗಲಿದೆ.
ಬಿಬಿಎಂಪಿ ಅಧಿಕಾರಿ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಚುನಾವಣೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಆರೋಗ್ಯ ವೈದ್ಯಾಧಿಕಾರಿ ಡಾ. ಶೋಭಾ ಅವರು ಕಣದಲ್ಲಿದ್ದು, ಹಿರಿಯ ಆರೋಗ್ಯ ಪರಿವೀಕ್ಷಕರಾದ ಆರ್. ರೇಣುಕಾಂಬ, ಕೆ. ಸಂತೋಷಕುಮಾರ ನಾಯ್ಕ ಸ್ಪರ್ಧೆಯಲ್ಲಿದ್ದಾರೆ. ಸಹಾಯ ಕಾರ್ಯಪಾಲಕ ಎಂಜಿನಿಯರ್ಗಳಾದ ವಿ. ಉಮೇಶ್, ಎಚ್.ಕೆ. ತಿಪ್ಪೇಶ್, ಎಂ. ಸಂತೋಷ್ಕುಮಾರ್, ಸಹಾಯಕ ಎಂಜಿನಿಯರ್ ಕೆ. ಮಂಜೇಗೌಡ, ಪ್ರಾಂಶುಪಾಲರಾದ ಎನ್.ಎಸ್. ಸೋಮಶೇಖರ್ ಸ್ಪರ್ಧೆಗಿಳಿದಿದ್ದಾರೆ.
ಪ್ರಸ್ತುತ ಸಂಘದ ಅಧ್ಯಕ್ಷರಾಗಿರುವ ಎ. ಅಮೃತ್ರಾಜ್ ನೇತೃತ್ವದಲ್ಲಿ ಈ ಏಳು ಜನ ಸೇರಿದಂತೆ 17 ಜನ ಕಾರ್ಯಕಾರಿ ಸಮಿತಿಯ ಎಲ್ಲ ಸ್ಥಾನಗಳಿಗೆ ಸ್ಪರ್ಧಿಸಿದ್ದಾರೆ. ಅಳಿಲು, ಕೊಳಾಯಿ, ಸಿಂಹ, ಸ್ಥೇತಸ್ಕೋಪ್, ಆಟೊ, ಮೊಲ, ಗಾಳಿಪಟ, ಸೀಲಿಂಗ್ ಫ್ಯನ್ ಸೇರಿದಂತೆ ಹಲವು ರೀತಿಯ ಚಿಹ್ನೆಗಳನ್ನು ಅಭ್ಯರ್ಥಿಗಳಿಗೆ ನೀಡಲಾಗಿದೆ. ಸಂಘದಲ್ಲಿ 2600 ಸದಸ್ಯರಿದ್ದು, ಪ್ರತಿಯೊಬ್ಬರೂ 17 ಮಂದಿಗೆ ಮತ ಚಲಾಯಿಸಲು ಅವಕಾಶವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.