ADVERTISEMENT

ಗ್ರೇಟರ್ ಬೆಂಗಳೂರು ದಕ್ಷಿಣ ಪಾಲಿಕೆ: ಬಾಬು, ವರಲಕ್ಷ್ಮಮ್ಮ ಅಮಾನತಿಗೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 0:00 IST
Last Updated 22 ಡಿಸೆಂಬರ್ 2025, 0:00 IST
   

ಬೆಂಗಳೂರು: ಇ–ಖಾತಾ ಪಡೆಯಲು ಅರ್ಜಿಯೊಂದಿಗೆ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರೂ ವಿನಾಕಾರಣ ಅರ್ಜಿಯನ್ನು ತಿರಸ್ಕರಿಸಿರುವ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಉಪ ಆಯುಕ್ತ (ಬೊಮ್ಮನಹಳ್ಳಿ) ಡಿ.ಕೆ. ಬಾಬು ಮತ್ತು ಕಂದಾಯ ಅಧಿಕಾರಿ (ಬಿಟಿಎಂ ಲೇಔಟ್‌) ವರಲಕ್ಷ್ಮಮ್ಮ ಅವರನ್ನು ಅಮಾನತಿನಲ್ಲಿರಿಸಲು ನಗರಾಭಿವೃದ್ಧಿ ಇಲಾಖೆಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಉಪ ಆಯುಕ್ತರು ಪ್ರಸ್ತಾವ ಸಲ್ಲಿಸಿದ್ದಾರೆ.

ಅರ್ಜಿದಾರ ಡಿ.ಪಿ. ಮುರಳೀಧರ್‌ ಅವರು ಜಯನಗರ 5ನೇ ಕ್ರಾಸ್‌ನಲ್ಲಿರುವ ಸ್ವತ್ತಿಗೆ ಸಂಬಂಧಿಸಿದಂತೆ ಅಂತಿಮ ಇ–ಖಾತಾ ಪಡೆಯಲು ಅರ್ಜಿ ಸಲ್ಲಿಸಿದ್ದರು. ಕ್ರಯಪತ್ರ ಸಹಿತ ಅಗತ್ಯ ದಾಖಲೆಗಳನ್ನು ನೀಡಿದ್ದರು. ಸ್ವತ್ತು ‘ಎ’ ಆಸ್ತಿವಹಿ ಸಂಖ್ಯೆ ನಮೂದಿಸಿ ವಿಷಯ ನಿರ್ವಾಹಕರು ಅರ್ಜಿಯ ಅನುಮೋದನೆಗೆ ಪ್ರಸ್ತಾವ ಸಲ್ಲಿಸಿದ್ದರು. ಆದರೂ ‘ಎ’ ಅಥವಾ ‘ಬಿ’ ಖಾತಾ ಎಂಬುದನ್ನು ವಿಷಯ ನಿರ್ವಾಹಕರು ನಮೂದಿಸಿಲ್ಲ. ಸರಿಯಾದ ದಾಖಲೆ ಸಲ್ಲಿಸಿಲ್ಲ ಎಂದು ಷರಾ ಬರೆದು ಕಂದಾಯ ಅಧಿಕಾರಿ ತಿರಸ್ಕರಿಸಿದ್ದರು. ಬೊಮ್ಮನಹಳ್ಳಿ ಉಪ ಆಯುಕ್ತರು ಕೂಡ ತಿರಸ್ಕರಿಸಿದ್ದರು ಎಂದು ಕಂದಾಯ ವಿಭಾಗದ ಜಂಟಿ ಆಯುಕ್ತರು ನೀಡಿದ ವರದಿ ಮತ್ತು ವಿಶೇಷ ಆಯಕ್ತರು ನೀಡಿದ ವರದಿಯಲ್ಲಿ ತಿಳಿಸಿದ್ದಾರೆ.

ನಗರ ಪಾಲಿಕೆಗೆ, ಜಿಬಿಎಗೆ ಕೆಟ್ಟ ಹೆಸರು ಬರಲು ಇದು ಕಾರಣವಾಗಿದೆ. ಹಾಗಾಗಿ ಡಿ.ಕೆ. ಬಾಬು ಮತ್ತು ವರಲಕ್ಷ್ಮಮ್ಮ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲು ಹಾಗೂ ಮುಂದಿನ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.