ಬೆಂಗಳೂರು: ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಮುದ್ದಿನ ಪಾಳ್ಯದ ಡಿ. ಗ್ರೂಪ್ ಬಡಾವಣೆಯ ರಿಲಯನ್ಸ್ ಫ್ರೆಶ್ ಮಾರ್ಟ್ ಹಾಗೂ ಉಡುಪಿ ಕೈರುಚಿ ಹೋಟೆಲ್ಗಳನ್ನು ಕೋವಿಡ್ ನಿಯಂತ್ರಣ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಮಂಗಳವಾರ ಮುಚ್ಚಿಸಿದ್ದಾರೆ.
ರಾಜರಾಜೇಶ್ವರಿ ನಗರ ವಲಯದ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ನೇತೃತ್ವದ ಅಧಿಕಾರಿಗಳ ತಂಡವು ಕೋವಿಡ್ ನಿಯಮಗಳ ಪಾಲನೆ ಪರಿಶೀಲನೆ ನಡೆಸುತ್ತಿತ್ತು. ಈ ವೇಳೆ ರಿಲಯನ್ಸ್ ಫ್ರೆಶ್ ಮಾರ್ಟ್ ಹಾಗೂ ‘ಉಡುಪಿ ಕೈರುಚಿ’ ಹೋಟೆಲ್ಗಳು ಕೋವಿಡ್ ಸೋಂಕು ಹರಡದಂತೆ ತಡೆಯಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಕಂಡು ಬಂದಿತ್ತು.
‘ರಿಲಯನ್ಸ್ ಫ್ರೆಶ್ ಮಾರ್ಟ್ನಲ್ಲಿ ಹಾಗೂ ಉಡುಪಿ ಕೈರುಚಿ ಹೋಟೆಲ್ನಲ್ಲಿ ಯಾರೂ ಮಾಸ್ಕ್ ಧರಿಸಿರಲಿಲ್ಲ. ಸೋಂಕು ನಿವಾರಕ ದ್ರಾವಣದಿಂದ ಕೈತೊಳೆಯುವ ವ್ಯವಸ್ಥೆಯನ್ನೂ ಇಲ್ಲಿ ಕಲ್ಪಿಸಿರಲಿಲ್ಲ. ಗ್ರಾಹಕರ ದೇಹದ ಉಷ್ಣಾಂಶ ತಪಾಸಣೆಗೂ ವ್ಯವಸ್ಥೆ ಮಾಡಿರಲಿಲ್ಲ. ಹಾಗಾಗಿ ಇವುಗಳನ್ನು ಮುಚ್ಚಲಾಗಿದೆ’ ಎಂದು ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.