ಬೆಂಗಳೂರು: ಸಂಕಷ್ಟಕ್ಕೆ ಸಿಲುಕಿರುವ ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಹಾಗೂ ಇನ್ನಿತರ ತುರ್ತು ಕಾರ್ಯಗಳಿಗೆ ಬಳಸಲು ಬಿಬಿಎಂಪಿ ಪ್ರತಿ ವಲಯಕ್ಕೆ ತಲಾ ₹ 10 ಲಕ್ಷ ಬಿಡುಗಡೆ ಮಾಡಿದೆ.
ಪಾಲಿಕೆಯ ಉಪ ನಿಯಂತ್ರಕರು (ಹಣಕಾಸು)ಎಲ್ಲ 8 ವಲಯಗಳ ಜಂಟಿ ಆಯುಕ್ತರ ಖಾತೆಗಳಿಗೆ ಸೋಮವಾರ ಹಣ ಬಿಡುಗಡೆ ಮಾಡಿದ್ದಾರೆ.
ವಲಸೆ ಕಾರ್ಮಿಕರಿಗೆ ಆಶ್ರಯ: ದಾಸರಹಳ್ಳಿ ವಲಯದ ಬಾಗಲಕುಂಟೆ ವಾರ್ಡ್ನಲ್ಲಿ 3 ಟ್ರ್ಯಾಕ್ಟರ್ಗಳ ಮೂಲಕ ವಲಸೆ ಹೊರಟಿದ್ದಸುಮಾರು 50 ವಲಸೆ ಕಾರ್ಮಿಕರನ್ನು ಪಾಲಿಕೆಯ ವಿಶೇಷ ಆಯುಕ್ತ (ಹಣಕಾಸು) ಲೋಕೇಶ್, ಜಂಟಿ ಆಯುಕ್ತ ನರಸಿಂಹಮೂರ್ತಿ ನೇತೃತ್ವದ ಅಧಿಕಾರಿಗಳ ತಂಡವು ತಡೆದಿದೆ. ಕಾರ್ಮಿಕರು ಉಳಿದುಕೊಳ್ಳುವುದಕ್ಕೆ ಇದೇ ವಾರ್ಡ್ನಲ್ಲಿರುವ ಕಾರ್ಮಿಕ ಇಲಾಖೆಯ ಸಮುದಾಯ ಭವನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅವರಿಗೆ ಇಂದಿರಾ ಕ್ಯಾಂಟೀನ್ನಿಂದ ಉಚಿತ ಊಟವನ್ನೂ ಒದಗಿಸಲಾಗುತ್ತಿದೆ.
ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ನಿರಾಶ್ರಿತರಿಗಾಗಿ ಪಾಲಿಕೆಯು ಇಂದಿರಾ ಕ್ಯಾಂಟೀನ್ ಹಾಗೂ ಸ್ವಯಂ ಸೇವಾ ಸಂಘಗಳಿಂದ ಉಚಿತ ಊಟದ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ. ಆಹಾರದ ಅಗತ್ಯ ಇರುವವರು ಸಹಾಯವಾಣಿಗೆ (155214) ಕರೆ ಮಾಡಬಹುದು ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಗಾಂಧಿನಗರದಲ್ಲಿ ನಿರಾಶ್ರಿತರ ಕೇಂದ್ರ
ಅನ್ಯರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬಂದು ನಗರದಲ್ಲಿ ನೆಲೆಸಿರುವ ದಿನಗೂಲಿ ಕಾರ್ಮಿಕರಿಗೆ ಆಶ್ರಯ ಕಲ್ಪಿಸಲು ಗಾಂಧಿನಗರದ ಕಾನಿಷ್ಕ ಹೋಟೆಲ್ ಬಳಿಯ ಪ್ರೌಢ ಶಾಲೆಯನ್ನು ತಾತ್ಕಾಲಿಕ ನಿರಾಶ್ರಿತರ ಕೇಂದ್ರವನ್ನಾಗಿ ಬಿಬಿಎಂಪಿ ಪರಿವರ್ತಿಸಿದೆ.
ತಾತ್ಕಾಲಿಕ ನಿರಾಶ್ರಿತರ ಕೇಂದ್ರದಲ್ಲಿ 60 ಮಂದಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಅವರಿಗೆ ಇಂದಿರಾ ಕ್ಯಾಂಟೀನ್ನಿಂದ ಆಹಾರದ ಪೊಟ್ಟಣ ಪೂರೈಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.