ADVERTISEMENT

ದೇವೆಂದ್ರಪ್ಪ ಲಂಚ ಪ್ರಕರಣ ಪರಿಣಾಮ| ನಗರ ಯೋಜನೆ ವಿಭಾಗದ 41 ಅಧಿಕಾರಿಗಳ ವರ್ಗ

ದೇವೆಂದ್ರಪ್ಪ ಲಂಚ ಪಡೆದು ಅಮಾನತುಗೊಂಡ ಪ್ರಕರಣ ಬೆಳಕಿಗೆ ಬಂದ ಬಳಿಕ ಆಯುಕ್ತರಿಂದ ಕ್ರಮ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 18:54 IST
Last Updated 10 ಫೆಬ್ರುವರಿ 2021, 18:54 IST
ಬಿಬಿಎಂಪಿ ಕೇಂದ್ರ ಕಚೇರಿ
ಬಿಬಿಎಂಪಿ ಕೇಂದ್ರ ಕಚೇರಿ    

ಬೆಂಗಳೂರು: ಬೊಮ್ಮನಹಳ್ಳಿ ವಲಯದ ಕಚೇರಿಯ ನಗರ ಯೋಜನಾ ವಿಭಾಗದಲ್ಲಿ ಪ್ರಭಾರ ಸಹಾಯಕ ನಿರ್ದೇಶಕ ಎಸ್‌.ಎನ್‌ ದೇವೇಂದ್ರಪ್ಪ ಅವರು ಲಂಚ ಪಡೆದು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಬೆನ್ನಲ್ಲೇ ಬಿಬಿಎಂಪಿಯ ನಗರ ಯೋಜನ ವಿಭಾಗದ ಅಧಿಕಾರಿಗಳನ್ನು ಭಾರಿ ಪ್ರಮಾಣದಲ್ಲಿ ವರ್ಗ ಮಾಡಲಾಗಿದೆ.

ಅನೇಕ ವರ್ಷಗಳಿಂದ ಒಂದೇ ವಲಯದಲ್ಲಿ ಹಾಗೂ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಗರ ಯೋಜನೆ ವಿಭಾಗದ ಒಟ್ಟು 41 ಅಧಿಕಾರಿಗಳನ್ನು ವರ್ಗ ಮಾಡಿ ಬಿಬಿಎಂಪಿ ಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಬುಧವಾರ ಆದೇಶ ಹೊರಡಿಸಿದ್ದಾರೆ. 16 ಅಧಿಕಾರಿಗಳಿಗೆ ಯಾವುದೇ ಹುದ್ದೆಯನ್ನು ತೋರಿಸಿಲ್ಲ.

‘ಅನೇಕ ಎಂಜಿನಿಯರ್‌ಗಳು ಒಂದೇ ವಲಯದಲ್ಲಿ, ಒಂದೇ ಹುದ್ದೆಯಲ್ಲಿ ಏಳೆಂಟು ವರ್ಷಗಳಿಂದ ಇದ್ದರು. ಅಂತಹವರನ್ನು ಬೇರೆ ಕಚೇರಿಗಳಿಗೆ ಹಾಗೂ ಬೇರೆ ವಲಯಗಳಿಗೆ ವರ್ಗ ಮಾಡಿದ್ದೇನೆ. ಕೆಲವರನ್ನು ಕೆರೆ ನಿರ್ವಹಣೆ ಹಾಗೂ ವಾರ್ಡ್‌ ಎಂಜಿನಿಯರ್‌ಗಳನ್ನಾಗಿ ಬಳಸಿಕೊಳ್ಳುವಂತೆ ಜಂಟಿ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದು ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕಟ್ಟಡವೊಂದರ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ನೀಡಲು ₹ 20 ಲಕ್ಷ ಲಂಚ ಪಡೆದ ದೇವೇಂದ್ರಪ್ಪ ಅವರನ್ನು ಫೆ 5ರಂದುಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಅವರು ಅನೇಕ ವರ್ಷಗಳಿಂದ ಒಂದೇ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಗರ ಯೋಜನಾ ವಿಭಾಗದಲ್ಲಿ ಅವರಂತೆಯೇ ಅನೇಕ ಅಧಿಕಾರಿಗಳೂ ಬಹಳ ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.