ADVERTISEMENT

ಅರ್ಕಾವತಿ ಬಡಾವಣೆ: 307 ಸಂತ್ರಸ್ತರಿಗೆ ಬದಲಿ ನಿವೇಶನ ಹಂಚಿಕೆ

ಹಂಚಿಕೆಯಾದ ನಿವೇಶನ ಕಳೆದುಕೊಂಡು ಗೊಂದಲದಲ್ಲಿದ್ದ ಫಲಾನುಭವಿಗಳು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 20:18 IST
Last Updated 4 ಆಗಸ್ಟ್ 2021, 20:18 IST
ಅರ್ಕಾವತಿ ಬಡಾವಣೆ ನಿವೇಶನದಾರರಿಗೆ ಬದಲಿ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನುಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಬುಧವಾರ ನಡೆಸಿಕೊಟ್ಟರು. ಬಿಡಿಎ ಆಯುಕ್ತ ರಾಜೇಶ್‌ ಗೌಡ, ಕಾರ್ಯದರ್ಶಿ ಆನಂದ್‌ ಹಾಗೂ ಬಡಾವಣೆಯ ನಿವೇಶನದಾರರು ಇದ್ದಾರೆ
ಅರ್ಕಾವತಿ ಬಡಾವಣೆ ನಿವೇಶನದಾರರಿಗೆ ಬದಲಿ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನುಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಬುಧವಾರ ನಡೆಸಿಕೊಟ್ಟರು. ಬಿಡಿಎ ಆಯುಕ್ತ ರಾಜೇಶ್‌ ಗೌಡ, ಕಾರ್ಯದರ್ಶಿ ಆನಂದ್‌ ಹಾಗೂ ಬಡಾವಣೆಯ ನಿವೇಶನದಾರರು ಇದ್ದಾರೆ   

ಬೆಂಗಳೂರು: ಅರ್ಕಾವತಿ ಬಡಾವಣೆಯಲ್ಲಿ ಹಂಚಿಕೆಯಾಗಿದ್ದ ನಿವೇಶನವನ್ನು ಡಿನೋಟಿಫಿಕೇಷನ್‌ ಹಾಗೂ ರೀಡೂ ಪ್ರಕ್ರಿಯೆಯಿಂದಾಗಿ ಕಳೆದುಕೊಂಡಿದ್ದ 307 ಫಲಾನುಭವಿಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬುಧವಾರ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿತು.

249 ಫಲಾನುಭವಿಗಳಿಗೆ ಅದೇ ಬಡಾವಣೆಯಲ್ಲಿ ಹಾಗೂ 58 ಮಂದಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ.

‘ಪ್ರಜಾವಾಣಿ’ಇತ್ತೀಚೆಗೆ ಏರ್ಪಡಿಸಿದ್ದ ‘ಪೋನ್‌–ಇನ್‌’ ಕಾರ್ಯಕ್ರಮದಲ್ಲಿ ಅರ್ಕಾವತಿ ಬಡಾವಣೆಯ ಅನೇಕ ನಿವೇಶನದಾರರು ತಮಗೆ ಬದಲಿ ನಿವೇಶನ ಹಂಚಿಕೆ ಆಗದ ಬಗ್ಗೆ ಅಳಲು ತೋಡಿಕೊಂಡಿದ್ದರು.ಕೆಲವು ಸಂತ್ರಸ್ತರಂತೂ, ‘15 ವರ್ಷಗಳಿಂದ ನಿವೇಶನಕ್ಕಾಗಿ ಬಿಡಿಎ ಕಚೇರಿಗೆ ಅಲೆದಾಡುತ್ತಿದ್ದೇವೆ. ನಮ್ಮ ಜೀವಿತಾವಧಿಯ ಉಳಿತಾಯದ ಹಣವನ್ನು ಸೇರಿಸಿ, ಸಾಲ ಮಾಡಿ ಈ ಬಡಾವಣೆಯಲ್ಲಿ ನಿವೇಶನ ಖರೀದಿಸಿದ್ದೆವು. ಬಿಡಿಎ ತಪ್ಪಿನಿಂದಾಗಿ ನಾವು ನಮ್ಮ ನಿವೇಶನದಲ್ಲಿ ಮನೆ ನಿರ್ಮಿಸಲು ಇನ್ನೂ ಸಾಧ್ಯವಾಗಿಲ್ಲ. ನಮಗೆ ಈಗ ವಯಸ್ಸಾಗಿದೆ. ಇನ್ನಷ್ಟು ದಿನ ಕಾಯಲು ನಮ್ಮಿಂದಾಗದು’ ಎಂದು ಪರಿಸ್ಥಿತಿ ವಿವರಿಸಿದ್ದರು.

ADVERTISEMENT

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅರ್ಕಾವತಿ ಬಡಾವಣೆಯ ಸಂತ್ರಸ್ತರ ಅಳಲು ಆಲಿಸಿದ್ದ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅದೇ ಬಡಾವಣೆಯಲ್ಲಿ ಶೀಘ್ರವೇ ಬದಲಿ ನಿವೇಶನ ಹಂಚಿಕೆ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಬಿಡಿಎ ಕೇಂದ್ರ ಕಚೇರಿಯಲ್ಲಿ ನಿವೇಶನದಾರರ ಸಮ್ಮುಖದಲ್ಲಿಯೇ ಕಂಪ್ಯೂಟರೀಕೃತ ಆಯ್ಕೆ ಪ್ರಕ್ರಿಯೆ ಮೂಲಕ ಬದಲಿ ನಿವೇಶನ ಹಂಚಿಕೆ ಮಾಡಿದರು.

ಪಾರದರ್ಶಕವಾಗಿ ನಿವೇಶನ ಹಂಚಿಕೆ: ‘ಸಾಮಾನ್ಯವಾಗಿ ನಿವೇಶನ ಹಂಚಿಕೆ ವೇಳೆ ದಲ್ಲಾಳಿಗಳು, ಮಧ್ಯವರ್ತಿಗಳ ಹಸ್ತಕ್ಷೇಪ ಇರುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಈ ಸಲ ಬದಲಿ ನಿವೇಶನ ಹಂಚಿಕೆಗೆ ಯಾರ ಹಸ್ತಕ್ಷೇಪಕ್ಕೂ ಅವಕಾಶ ಇಲ್ಲದ ರೀತಿ ಸಂಪೂರ್ಣ ಕಂಪ್ಯೂಟರೀಕೃತ ಆಯ್ಕೆ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಮೂಲಕ ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ. ಫಲಾನುಭವಿಗಳ ವಯಸ್ಸನ್ನು ಪರಿಗಣಿಸಿ, ಜ್ಯೇಷ್ಠತೆ ಆಧಾರದಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ’ ಎಂದು ವಿಶ್ವನಾಥ್‌ ತಿಳಿಸಿದರು.

‘ಬಡಾವಣೆಯಲ್ಲಿ ಎಷ್ಟು ನಿವೇಶನಗಳು ಲಭ್ಯವಾಗಲಿವೆ ಎಂದು ನೋಡಿಕೊಂಡು ಹಂತಹಂತವಾಗಿ ಇನ್ನಷ್ಟು ಮಂದಿಗೆ ಬದಲಿ ನಿವೇಶನಗಳನ್ನು ಇದೇ ಮಾದರಿಯಲ್ಲಿ ಹಂಚಿಕೆ ಮಾಡಲಾಗುತ್ತದೆ’ ಎಂದು ಅವರು ಭರವಸೆ ನೀಡಿದರು.

‘ಅರ್ಕಾವತಿಯಲ್ಲಿ ನಿವೇಶನ ಹಂಚಿಕೆಯಾಗಿ ನೋಂದಣಿ ಮಾಡಿಕೊಂಡು ನಾನಾ ಕಾರಣಗಳಿಂದಾಗಿ ನಿವೇಶನ ವಂಚಿತರಾಗಿರುವವರು ಬಯಸಿದರೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲು ಬಿಡಿಎ ಸಿದ್ಧ. ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ಕೋರಿ ಅರ್ಜಿ ಸಲ್ಲಿಸುವವರಿಗೆ 15 ರಿಂದ 20 ದಿನಗಳೊಳಗಾಗಿ ನಿವೇಶನವನ್ನು ಹಂಚಿಕೆ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

ಬಿಡಿಎ ಆಯುಕ್ತ ಎಂ.ಬಿ. ರಾಜೇಶ್ ಗೌಡ, ಇತರ ಅಧಿಕಾರಿಗಳು ಹಾಗೂ ಅರ್ಕಾವತಿ ನಿವೇಶನದಾರರು ಭಾಗವಹಿಸಿದರು.

-0-

ಅಂಕಿ ಅಂಶ

140

ಅರ್ಕಾವತಿ ಬಡಾವಣೆ ಸಂತ್ರಸ್ತರಿಗೆ ಹಂಚಿಕೆ ಮಾಡಿದ 20x30 ಚ.ಅಡಿ ವಿಸ್ತೀರ್ಣದ ಬದಲಿ ನಿವೇಶನಗಳು

85

30x40 ಚ.ಅಡಿ ವಿಸ್ತೀರ್ಣದ ನಿವೇಶನಗಳು

24

40x60 ಚ.ಅಡಿ ವಿಸ್ತೀರ್ಣದ ಬದಲಿ ನಿವೇಶನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.