ADVERTISEMENT

ನಿಯಮದ ಪ್ರಕಾರವೇ ನಿವೇಶನ ಮಂಜೂರು ಮಾಡಲು ಒತ್ತಾಯ

ಕೆಂಪೇಗೌಡ ಬಡಾವಣೆ: ಭೂಮಿ ನೀಡಿದವರೊಂದಿಗೆ ಸಭೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 19:19 IST
Last Updated 26 ಜುಲೈ 2019, 19:19 IST

ಬೆಂಗಳೂರು:ನಾಡಪ್ರಭು ಕೆಂಪೇಗೌಡ ಬಡಾವಣೆ (ಎನ್‌ಪಿಕೆಎಲ್‌) ನಿರ್ಮಾಣಕ್ಕೆ ಭೂಮಿ ನೀಡಿರುವ ರೈತರ ಜತೆ ಬಿಡಿಎ ಆಯುಕ್ತರಾದ ಡಾ.ಎನ್‌. ಮಂಜುಳಾ ಶುಕ್ರವಾರ ಸಭೆ ನಡೆಸಿದರು.

ಎನ್‌ಪಿಕೆಎಲ್‌ ಮತ್ತು ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ನಿರ್ಮಾಣಕ್ಕೆ ಭೂಮಿ ನೀಡಿರುವ 12 ಗ್ರಾಮಗಳ ರೈತರೊಂದಿಗೆ ಸಭೆ ನಡೆಸಿದ ಆಯುಕ್ತರು, ಅಹವಾಲು ಆಲಿಸಿದರು.ನಿವೇಶನ ನೋಂದಣಿ ಮಾಡಿಕೊಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದ ರೈತರು, ಪರಿಹಾರ ನೀಡಬೇಕು ಎಂದೂ ಒತ್ತಾಯಿಸಿದರು.

‘ನಿಯಮದಂತೆ ಬಡಾವಣೆಗೆ ಭೂಮಿ ನೀಡಿದವರಿಗೆ ನಿವೇಶನ ನೀಡುವ ಬದಲಿಗೆ, ಅರ್ಕಾವತಿ ಲೇಔಟ್‌ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ, ಎನ್‌ಪಿಕೆಎಲ್‌ ಬಡಾವಣೆಯಲ್ಲಿ ನಿವೇಶನ ನೀಡಲಾಗುತ್ತಿದೆ. ಬಿಡಿಎ ಅವೈಜ್ಞಾನಿಕವಾಗಿ ನಿವೇಶನ ಹಂಚಿಕೆ ಮಾಡುತ್ತಿದೆ’ ಎಂದು ಎನ್‌ಪಿಕೆಎಲ್‌ ಹೋರಾಟ ಸಮಿತಿ ಅಧ್ಯಕ್ಷ ಚನ್ನಪ್ಪ ದೂರಿದರು.

ADVERTISEMENT

‘ದಶಕ ಕಳೆದರೂ ನಮ್ಮ ಬೇಡಿಕೆಗೆ ಬಿಡಿಎ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ, ಬಡಾವಣೆ ನಿರ್ಮಾಣಕ್ಕೆ ನೀಡಿರುವ ನಮ್ಮ ಭೂಮಿಯನ್ನು ವಾಪಸ್‌ ಪಡೆಯುತ್ತೇವೆ. ಜಮೀನಿನ ಸುತ್ತಲೂ ಬೇಲಿ ಹಾಕುತ್ತೇವೆ’ ಎಂದು ರೈತರು ಎಚ್ಚರಿಸಿದರು.

ತಿಂಗಳೊಳಗೆ ಬೇಡಿಕೆ ಈಡೇರಿಸುವುದಾಗಿ ಆಯುಕ್ತರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.