ಬೆಂಗಳೂರು: ಬೇಗೂರು ಕೆರೆಯಲ್ಲಿ ಕೃತಕವಾಗಿ ನಿರ್ಮಿಸಿರುವ ದ್ವೀಪದಲ್ಲಿನ ಪ್ರತಿಮೆ ಅನಾವರಣಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಕೆರೆಯ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ತಡೆಯಾಜ್ಞೆಯ ನಡುವೆಯೂ ಕೆರೆಯಲ್ಲಿನ ಪ್ರತಿಮೆ ಅನಾವರಣಗೊಳಿಸಲಾಗಿದೆ ಎಂದು ಪರಿಸರ ಸಂರಕ್ಷಕರ ಗುಂಪು ಸಲ್ಲಿಸಿದ್ದ ಮೆಮೊ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ಹೊರಡಿಸಿತು.
ತಡೆಯಾಜ್ಞೆ ಆದೇಶದಿಂದ ಯಾರ ಮನಸಿಗಾದರೂ ನೋವಾಗಿದ್ದರೆ ಕಾನೂನಿನ ಅಡಿಯಲ್ಲೇ ಪರಿಹಾರ ಕಂಡುಕೊಳ್ಳಲು ಅವಕಾಶ ಇದೆ. ಆದರೆ, ಮುಚ್ಚಿರುವ ಪ್ರತಿಮೆಯನ್ನು ಪದೇ ಪದೇ ತೆಗೆದು ಅನಾವರಣಗೊಳಿಸುತ್ತಿರುವುದು ಆಘಾತಕಾರಿ ಸಂಗತಿ. ಹಾಳಾಗಿರುವ ಕೆರೆಯ ಸ್ವರೂಪ ಪುನರ್ ಸ್ಥಾಪಿಸುವುದು ಆದೇಶದ ಉದ್ದೇಶ. ಅದನ್ನು ತಿರಸ್ಕರಿಸುವುದು ಕಾನೂನುಬಾಹಿರ’ ಎಂದು ಪೀಠ ಹೇಳಿತು.
‘ಕೆರೆಯ ಮಧ್ಯದಲ್ಲಿ ದ್ವೀಪ ನಿರ್ಮಿಸಲು ಕಾನೂನಿನ ಅಡಿಯಲ್ಲಿ ಅವಕಾಶ ಇದೆಯೇ ಎಂಬುದು ಅರ್ಜಿದಾರರ ಪ್ರಶ್ನೆಗಳಾಗಿವೆ. ಯಾವುದೇ ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಅರ್ಜಿಗಳು ಒಳಗೊಂಡಿಲ್ಲ’ ಎಂದು ಪೀಠ ಸ್ಪಷ್ಟಪಡಿಸಿತು. ಮುಂದಿನ ಮಂಗಳವಾರದೊಳಗೆ ಅನುಸರಣಾ ವರದಿ ಸಲ್ಲಿಸಬೇಕು.ಪ್ರತಿಮೆಯನ್ನು ಮತ್ತೆ ಮುಚ್ಚಲು ಪೊಲೀಸರ ರಕ್ಷಣೆಯನ್ನು ಬಿಬಿಎಂಪಿ ಪಡೆಯಬೇಕು. ಹಾರಾಡುತ್ತಿರುವ ಧ್ವಜಗಳನ್ನು ತೆರವುಗೊಳಿಸಬೇಕು ಎಂದು ಪೀಠ ತಿಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.