ADVERTISEMENT

ನಾಪತ್ತೆಯಾಗಿದ್ದ ಬಾಲಕಿಯರು ಪತ್ತೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 19:22 IST
Last Updated 27 ಏಪ್ರಿಲ್ 2022, 19:22 IST

ಬೆಂಗಳೂರು:ಬಳ್ಳಾರಿಯಿಂದ ನಾಪತ್ತೆಯಾಗಿದ್ದ ನಾಲ್ವರು ಬಾಲಕಿಯರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಉಪ್ಪಾರಪೇಟೆ ಪೊಲೀಸರು ಅವರನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

‘ಬಳ್ಳಾರಿಯ ಸಾಯಿ ಆಸ್ಪತ್ರೆ ಬಳಿ ವಾಸವಿದ್ದ ವೀರೇಶ್‌ ಅವರ ಮಕ್ಕಳಾದ ಮೋನಿಕಾ (7), ದೀ‍‍‍ಪಿಕಾ (10), ಪಾರ್ವತಿನಗರದ ಚಂದ್ರಶೇಖರ ಗೌಡ ಅವರ ಪುತ್ರಿಯರಾದ ಯಶಸ್ವಿನಿ (9) ಹಾಗೂ ಪಲ್ಲವಿ (14) ಅವರು ಮಂಗಳವಾರ ರಾತ್ರಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ರವಿಕುಮಾರ್‌ ಹಾಗೂ ನಿರ್ವಾಹಕ ಬಂದೆ ನವಾಜ್‌ ಎಂಬುವರು ಬಾಲಕಿಯರನ್ನು ಕರೆದು ವಿಚಾರಿಸಿದಾಗ‌, ಮನೆಬಿಟ್ಟು ಬಂದಿರುವ ವಿಷಯ ತಿಳಿಸಿದ್ದರು. ಅವರು ಬಾಲಕಿಯರನ್ನು ಠಾಣೆಗೆ ಕರೆ ತಂದಿದ್ದರು’ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. ‘ರಿಯಾಲಿಟಿ ಶೋ ವೀಕ್ಷಿಸಿ ಅದರಲ್ಲಿ ಪಾಲ್ಗೊಂಡಿರುವ ಮಕ್ಕಳ ಹಾಗೆ ನಾವೂ ಸಾಧನೆ ಮಾಡಿ ಬರುತ್ತೇವೆ. ನಮ್ಮ ಬಗ್ಗೆ ಯಾರೂ ಚಿಂತಿಸಬೇಡಿ’ ಎಂದು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಟ್ಟು ಇವರು ಮನೆಯಿಂದ ಬಂದಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದರು. ಅವರ ಪೋಷಕರ ಮಾಹಿತಿ ಪಡೆದು ಸಂಪರ್ಕಿಸಲಾಯಿತು. ಅವರು ಠಾಣೆಗೆ ಬಂದು ಬಾಲಕಿಯರನ್ನು ಕರೆದುಕೊಂಡು ಹೋಗಿದ್ದಾರೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT