ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆಗೆ ಬೋಗಿ ನಿರ್ಮಾಣ ಕಾರ್ಯವನ್ನು ಬಿಇಎಂಎಲ್ಗೆ ನೀಡುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಕುಮಾರ್ ಹೂಟ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬುಧವಾರ ಭೇಟಿಯಾದ ಅವರು ಈ ಮನವಿ ಮಾಡಿದರು. ‘ಮಹಾರಾಷ್ಟ್ರ ಮೆಟ್ರೊ ರೈಲು ನಿಗಮಕ್ಕೆ ಶೇ 70ರಷ್ಟು ಬೋಗಿಗಳನ್ನು ನಿರ್ಮಿಸಿಕೊಡುವ ಹೊಣೆ ಸಂಸ್ಥೆಗೆ ಲಭಿಸಿದೆ. ಅದೇ ರೀತಿ ರಾಜ್ಯದಲ್ಲೂ ಬೋಗಿ ನಿರ್ಮಾಣ ಕಾರ್ಯವನ್ನು ವಹಿಸಿದರೆ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸುತ್ತವೆ’ ಎಂದು ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ.
ಕೇಂದ್ರದಿಂದಲೂ ಬೇಡಿಕೆ:ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆ ಕೈಗೊಳ್ಳುವ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲು ತಮಗೂ ಅವಕಾಶ ನೀಡುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆಯ ನಿರ್ದೇಶಕ ಪ್ರಭಾಕರ್ ಸಿಂಗ್ ಸಹ ಮನವಿ ಮಾಡಿದ್ದಾರೆ.
ಇಲಾಖೆಯಲ್ಲಿ ತಾಂತ್ರಿಕ ಪರಿಣಿತಿ ಹೊಂದಿರುವ ತಜ್ಞರಿದ್ದು, ಅವರ ಸೇವೆಯನ್ನು ರಾಜ್ಯ ಸರ್ಕಾರ ಬಳಸಿಕೊಳ್ಳಬಹುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.