ಬೆಂಗಳೂರು: ರಘುವನಹಳ್ಳಿ, ದೊಡ್ಡಕಲ್ಲಸಂದ್ರ ಮತ್ತು ತಿಪ್ಪಸಂದ್ರ ಗ್ರಾಮಗಳ ವಿವಿಧ ಸರ್ವೆ ನಂಬರ್ಗಳಲ್ಲಿನ ಒತ್ತುವರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಗಳವಾರ ತೆರವುಗೊಳಿಸಿತು.
ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿಯ ದೊಡ್ಡಕಲ್ಲಸಂದ್ರ, ರಘುವನಹಳ್ಳಿ ಮತ್ತು ತಿಪ್ಪಸಂದ್ರ ಗ್ರಾಮ ಹಾಗೂ ಇತರೆ ಗ್ರಾಮಗಳಲ್ಲಿ ಬಡಾವಣೆ ನಿರ್ಮಿಸಲು 191 ಎಕರೆ 2 ಗುಂಟೆ ಜಮೀನನ್ನು ರಾಜ್ಯ ಸರ್ಕಾರ ಅಧಿಸೂಚಿಸಿತ್ತು.
ಬ್ಯಾಂಕ್ ಆಫೀಸರ್ಸ್ ಮತ್ತು ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಬಡಾವಣೆ ನಿರ್ಮಿಸಲು ಬಿಡಿಎ ಅನುಮೋದನೆ ನೀಡಿತ್ತು. ಅನುಮೋದಿತ ನಕ್ಷೆಯಂತೆ ಬಡಾವಣೆಯನ್ನು ರಚನೆ ಮಾಡಿರಲಿಲ್ಲ. ಉದ್ಯಾನಗಳ ಸ್ಥಳಗಳಲ್ಲಿ ನಿವೇಶನ ರಚಿಸಿ ಮಾರಾಟ ಮಾಡಿ, ಬಿಡಿಎ ಆದೇಶವನ್ನು ಉಲ್ಲಂಘಿಸಲಾಗಿತ್ತು.
ಹೀಗಾಗಿ, ಉದ್ಯಾನ ಮತ್ತು ಆಟದ ಮೈದಾನದಲ್ಲಿ ಒತ್ತುವರಿಯಾಗಿದ್ದ ಸುಮಾರು ಎರಡು ಎಕರೆ ಪ್ರದೇಶ ಹಾಗೂ ನಾಗರಿಕ ಸೌಲಭ್ಯ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡವನ್ನು ಬಿಡಿಎ ಸಿಬ್ಬಂದಿ ತೆರವುಗೊಳಿಸಿದರು. ಸುಮಾರು ನಾಲ್ಕು ಗುಂಟೆ ಪ್ರದೇಶವನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡಿರುವ ನಾಗರಿಕ ಸೌಲಭ್ಯ ನಿವೇಶನದ ಮೌಲ್ಯ ಸುಮಾರು ₹3.20 ಕೋಟಿ ಎಂದು ಬಿಡಿಎ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.