ಸಾಂದರ್ಭಿಕ-ಚಿತ್ರ
ಎ.ಐ ಚಿತ್ರ
ಬೆಂಗಳೂರು: ಕೆಂಪಾಪುರ ರಸ್ತೆಯ ಯಮಲೂರಿನ ಬಿಲ್ಡರ್ ಎಂ.ಆರ್.ಶಿವಕುಮಾರ್ ಅವರ ಮನೆಯಲ್ಲಿ ₹18 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತ್ಹಳ್ಳಿ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಲಾಕರ್ನಲ್ಲಿದ್ದ ₹17.73 ಕೋಟಿ ಮೌಲ್ಯದ 11.5 ಕೆ.ಜಿ ಚಿನ್ನ ಹಾಗೂ ವಜ್ರದ ಆಭರಣ, ₹14.60 ಲಕ್ಷ ಮೌಲ್ಯದ 5 ಕೆ.ಜಿ ಬೆಳ್ಳಿಯ ಸಾಮಗ್ರಿ, ₹11.50 ಲಕ್ಷ ನಗದು ಕಳ್ಳತನ ಮಾಡಿಕೊಂಡು ಮನೆಯಲ್ಲಿ ಕೆಲಸಕ್ಕಿದ್ದ ದಿನೇಶ್ (32) ಹಾಗೂ ಕಮಲಾ (25) ಪರಾರಿಯಾಗಿದ್ದಾರೆ. ಇಬ್ಬರೂ ನೇಪಾಳಕ್ಕೆ ತೆರಳಿ ತಲೆಮರೆಸಿಕೊಂಡಿರುವ ಶಂಕೆಯಿದೆ. ಅವರ ಪತ್ತೆಗೆ ವಿಶೇಷ ಪೊಲೀಸ್ ತಂಡಗಳು ತನಿಖೆ ಚುರುಕುಗೊಳಿಸಿವೆ ಎಂದು ಪೊಲೀಸರು ಹೇಳಿದರು.
ನೇಪಾಳದ ಮಾಯಾ ಹಾಗೂ ವಿಕಾಸ್ ದಂಪತಿ ಬಿಲ್ಡರ್ ಮನೆಯಲ್ಲಿ ಏಳು ತಿಂಗಳಿಂದ ಕೆಲಸ ಮಾಡುತ್ತಿದ್ದರು. ಊರಿಗೆ ಹೋಗುವುದಾಗಿ ಹೇಳಿ ಕೆಲವು ದಿನಗಳ ಹಿಂದೆ ಕೆಲಸ ಬಿಟ್ಟಿದ್ದರು. ಅದಾದ ಮೇಲೆ ಅವರೇ ನೇಪಾಳದ ದಿನೇಶ್ ಹಾಗೂ ಕಮಲಾ ಅವರನ್ನು ಬಿಲ್ಡರ್ ಮನೆಯಲ್ಲಿ ಕೆಲಸಕ್ಕೆ ಸೇರಿಸಿದ್ದರು. ಮಾಯಾ ಮತ್ತು ವಿಕಾಸ್ ದಂಪತಿಯೇ ಕಳ್ಳತನಕ್ಕೆ ಸಂಚು ರೂಪಿಸಿರುವ ಶಂಕೆ ಇದೆ. ದಿನೇಶ್ ಮತ್ತು ಕಮಲಾ ಅವರನ್ನು ಬಳಸಿಕೊಂಡು ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.