ಬೆಂಗಳೂರು: ರಸ್ತೆಯ ಉದ್ದಕ್ಕೂ ಇಕ್ಕೆಲಗಳಲ್ಲಿ ಕಣ್ಮನ ಸೆಳೆಯುವ ಕಲಾಕೃತಿಗಳು, ನಡುನಡುವೆ ಸ್ಥಳದಲ್ಲಿಯೇ ವ್ಯಕ್ತಿಯ ಭಾವಚಿತ್ರ ಹಾಗೂ ವ್ಯಂಗ್ಯಚಿತ್ರ ರಚಿಸುವ ಕಲಾವಿದರು. ಮಕ್ಕಳು ಮತ್ತು ಉದಯೋನ್ಮುಖ ಕಲಾವಿದರಿಗೆ ಚಿತ್ರ ಬರೆಯಲು ಅಗತ್ಯ ಸಾಮಗ್ರಿಗಳ ಮಾರಾಟ...
ಈ ದೃಶ್ಯ ಕಂಡುಬಂದದ್ದು ಕುಮಾರಕೃಪಾ ರಸ್ತೆಯಲ್ಲಿ. ಕರ್ನಾಟಕ ಚಿತ್ರಕಲಾ ಪರಿಷತ್ತು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 22ನೇ ಚಿತ್ರಸಂತೆಯಲ್ಲಿ ಕಲಾಲೋಕವೇ ಅನಾವರಣಗೊಂಡಿತ್ತು. ಈ ಚಿತ್ರಸಂತೆಯು ಕಲಾವಿದರ ಪ್ರತಿಭೆಗೆ ವೇದಿಕೆ ಕಲ್ಪಿಸುವುದರ ಜತೆಗೆ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೂ ಅವಕಾಶ ಒದಗಿಸಿತ್ತು. ಚಿತ್ರಸಂತೆಯು ಕಲಾವಿದರು ಮತ್ತು ಕಲಾಸಕ್ತರ ನಡುವೆ ಬಾಂಧವ್ಯ ಬೆಸೆಯುವ ಸೇತುವೆಯಾಯಿತು. ವರ್ಣಮಯ ಕಲಾಕೃತಿಗಳು ಕಲಾರಸಿಕರ ಸಂಭ್ರಮವನ್ನೂ ಇಮ್ಮಡಿಗೊಳಿಸಿದವು.
ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣುಮಕ್ಕಳಿಗೆ ಸಮರ್ಪಣೆ ಮಾಡಲಾಗಿತ್ತು. ಪರಿಷತ್ತಿನ ಪ್ರವೇಶ ದ್ವಾರದಲ್ಲಿಯೇ ಬಾಲಕಿಯ ಬೃಹದಾಕಾರದ ಕಲಾಕೃತಿ ನಿರ್ಮಿಸಲಾಗಿತ್ತು. ಇದು ನೆರೆದಿದ್ದ ಕಲಾಪ್ರೇಮಿಗಳ ಗಮನಸೆಳೆಯಿತು. ಪರಿಷತ್ತಿನ ಆವರಣದಲ್ಲಿ ಕಲಾಕೃತಿಗಳ ಜತೆಗೆ ಕರಕುಶಲ ವಸ್ತುಗಳು ಹಾಗೂ ಕಲಾಕೃತಿ ರಚನೆಗೆ ಅಗತ್ಯವಿರುವ ಬಣ್ಣ ಮತ್ತು ಅಗತ್ಯ ವಸ್ತುಗಳನ್ನೂ ಮಾರಾಟಕ್ಕೆ ಇರಿಸಲಾಗಿತ್ತು.
ಜಲವರ್ಣ, ಆ್ಯಕ್ರಿಲಿಕ್, ಮಧುಬನಿ, ತೈಲವರ್ಣ, ಡಿಜಿಟಲ್ ಪೇಂಟಿಂಗ್, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಕಾಫಿ ಪೇಂಟಿಂಗ್, ಮಂಡಲ ಕಲೆ, ಕಲಾಂಕಾರಿ ಕಲೆ ಸೇರಿ ನಾನಾ ಪ್ರಕಾರದ ಕಲಾಕೃತಿಗಳು ಗಮನಸೆಳೆದವು. ಉಬ್ಬು ಚಿತ್ರಗಳು ಕೂಡ ಪ್ರದರ್ಶನದಲ್ಲಿ ಇದ್ದವು.
ಪರಿಸರ, ವನ್ಯಜೀವಿಗಳು, ಐತಿಹಾಸಿಕ ದೇವಸ್ಥಾನಗಳು, ಗ್ರಾಮೀಣ ಸೊಗಡು, ಪೌರಾಣಿಕ ಪಾತ್ರಧಾರಿಗಳು, ಯಕ್ಷಗಾನ ವೇಷಧಾರಿಗಳು, ಮಹಿಳೆಯರ ವಿವಿಧ ಭಂಗಿಗಳು, ಜಾನಪದ ನೃತ್ಯ, ಉತ್ಸವ ಹಾಗೂ ಧಾರ್ಮಿಕ ಆಚರಣೆಗಳು, ವಿಷ್ಣು, ಗಣಪತಿ ಸೇರಿ ವಿವಿಧ ದೇವರು, ನಾಟ್ಯರಾಣಿ ಶಾಂತಲೆ, ಗೌತಮ ಬುದ್ಧ ಹಾಗೂ ಕಾಡು ಹಣ್ಣುಗಳ ಕಲಾಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು.
ರಸ್ತೆಯ ಉದ್ದಕ್ಕೂ ವ್ಯಕ್ತಿಯ ಭಾವಚಿತ್ರ ಹಾಗೂ ವ್ಯಂಗ್ಯ ಚಿತ್ರಗಳನ್ನು ಬಿಡಿಸುವವರು ಕಾಣಸಿಗುತ್ತಿದ್ದರು. ಪುಟ್ಟ ಮಕ್ಕಳು ಭಾವಚಿತ್ರ ಬಿಡಿಸಿಕೊಂಡು ಸಂಭ್ರಮಿಸಿದರೆ, ಯುವಕ ಯುವತಿಯರು ಹಚ್ಚೆ ಹಾಕಿಸಿಕೊಂಡು ಖುಷಿಪಟ್ಟರು. ರಕ್ತದಲ್ಲಿ ಕಲಾಕೃತಿ ರಚಿಸಿಕೊಡುವ ಕಲಾವಿದರೂ ಚಿತ್ರಸಂತೆಯಲ್ಲಿದ್ದರು.
ಚಿತ್ರಕಲಾ ವಿದ್ಯಾಲಯದ ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಪ್ರದರ್ಶಿಸಿದರು.
ಚಿತ್ರಸಂತೆಗೆ ಹಲವು ವರ್ಷಗಳಿಂದ ಬರುತ್ತಿದ್ದೇನೆ. ಹೆಚ್ಚಾಗಿ ಉತ್ಸವಗಳ ಕಲಾಕೃತಿ ರಚಿಸುತ್ತಿದ್ದು ಕಲಾಸಕ್ತರಿಂದ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆಮೀನಾಕ್ಷಿ ಸದಲಗಿ ಕಲಾವಿದೆ
ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಿತ್ರಸಂತೆ ಉತ್ತಮ ವೇದಿಕೆಯಾಗಿದೆ. ಕಲಾಕೃತಿಗಳ ಖರೀದಿಗೆ ಜನರು ಆಸಕ್ತಿ ತೋರುತ್ತಿದ್ದಾರೆಉಮೇಶ್ ನಾಯ್ಕ್ ಕಲಾವಿದ
ಚಿತ್ರಸಂತೆಯಲ್ಲಿ ₹ 1 ಸಾವಿರದಿಂದ ₹15 ಲಕ್ಷದವರೆಗಿನ ಕಲಾಕೃತಿಗಳಿದ್ದವು. ಕೆಲವರು ದುಬಾರಿ ಬೆಲೆ ಕೇಳಿ ಅಚ್ಚರಿಪಟ್ಟರೂ, ಕಲಾವಿದರ ಪ್ರತಿಭೆ ಮತ್ತು ಶ್ರಮಕ್ಕೆ ತಲೆದೂಗಿದರು. ಹೈದರಾಬಾದ್ ಕಲಾವಿದ ಪರಶುರಾಮ್ ಅವರು ತೈಲವರ್ಣ ಬಳಸಿ ಜಲ್ಲಿಕಟ್ಟು ಕ್ರೀಡೆಯನ್ನು ಚಿತ್ರಿಸಿದ್ದು, ಇದಕ್ಕೆ ₹ 15 ಲಕ್ಷ ನಿಗದಿಪಡಿಸಿದ್ದರು. ಇದು ಎಂಟು ಅಡಿ ಉದ್ದ ಹಾಗೂ ಆರು ಅಡಿ ಅಗಲವಿದ್ದು, ಇದಕ್ಕೆ ತೇಗದ ಮರದ ಚೌಕಟ್ಟು ಬಳಸಲಾಗಿದೆ.
ತಮಿಳುನಾಡಿನ ಕೊಯಮತ್ತೂರು ಕಲಾವಿದ ಜೀವನ್ ವಿ. ಶಕ್ತಿವೇಲು ಅವರು ರಚಿಸಿದ ‘ಚಿತಿರೈ ತಿರುವಿಝಾ’ ಉತ್ಸವದ ಕಲಾಕೃತಿ ಗಮನ ಸೆಳೆಯಿತು. ಇದಕ್ಕೆ ₹ 7 ಲಕ್ಷ ನಿಗದಿಪಡಿಸಲಾಗಿತ್ತು. ಕ್ಯಾನ್ವಾಸ್ ಮೇಲೆ ಚಿತ್ರಿಸಿದ ಈ ಕಲಾಕೃತಿ, 8x6 ಅಡಿಯಿದೆ. ‘ಇದಕ್ಕೆ ಆರು ಇಂಚು ಅಗಲದ ಹಲಗೆಯನ್ನು ಬಳಸಲಾಗಿದ್ದು, ಚಿತ್ರಿಸಲು ಒಂದು ವರ್ಷ ಬೇಕಾಯಿತು’ ಎಂದು ಜೀವನ್ ವಿ. ಶಕ್ತಿವೇಲು ತಿಳಿಸಿದರು.
ಕೊಯಮತ್ತೂರಿನ ಕಲಾವಿದ ಸತೀಶ್ ಎಂಬುವವರು ಕಲಾಕೃತಿಯೊಂದಲ್ಲಿ ಗಾಂಧೀಜಿ ಸೇರಿ ಜಗತ್ತಿನ 101 ಪ್ರಸಿದ್ಧ ವ್ಯಕ್ತಿಗಳನ್ನು ತಂದಿದ್ದಾರೆ. 3x7 ಅಡಿ ಅಳತೆಯ ಈ ಕಲಾಕೃತಿಗೆ ₹ 4 ಲಕ್ಷ
ಗೊತ್ತುಪಡಿಸಲಾಗಿದ್ದು, ಈ ಚಿತ್ರ ಬರೆಯಲು ಅವರು ಆರು ತಿಂಗಳು ತೆಗೆದುಕೊಂಡಿದ್ದಾರೆ. ಮೈಸೂರಿನ ವಿಂಟೇಜ್ ಹಾರ್ವೆಸ್ಟ್ ತಂಡವು 5x7 ಅಡಿ ಅಳತೆಯ ಮರದ ಕಲಾಕೃತಿಯನ್ನು ನಿರ್ಮಿಸಿದೆ. ಬಾಲಕಿಯೊಬ್ಬಳು ಮಂದಿರ ವೀಕ್ಷಿಸುತ್ತಿರುವ ಈ ಕಲಾಕೃತಿ ₹4 ಲಕ್ಷ ಬೆಲೆ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.