ಕನಕನಗರದ ರಸ್ತೆಯಲ್ಲಿರುವ ತ್ಯಾಜ್ಯ
‘ತ್ಯಾಜ್ಯದಿಂದ ಆವರಿಸಿಕೊಂಡ ರಸ್ತೆ’
ಯಲಚೇನಹಳ್ಳಿಯ ಕನಕನಗರದ ರಸ್ತೆಯ ಅರ್ಧ ಭಾಗವನ್ನು ಕಸದ ತ್ಯಾಜ್ಯ ಆವರಿಸಿಕೊಂಡಿದೆ. ಇದರಿಂದ ಅಲ್ಲಿ ಮೂಗು ಮುಚ್ಚಿಕೊಂಡೇ ಸಾಗುವ ಪರಿಸ್ಥಿತಿ ಇದೆ. ಈ ರಸ್ತೆಯು ಕಸದ ತೊಟ್ಟಿಯಾಗಿ ಪರಿಣಮಿಸಿದ್ದು, ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗದ ರೀತಿಯಲ್ಲಿ ಕಸ ಸುರಿಯಲಾಗುತ್ತಿದೆ. ಕ್ರಮೇಣ ಕೊಳೆತು ದುರ್ನಾತ ಬೀರುತ್ತಿದೆ. ಇದರಿಂದ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡೇ ಸಾಗುವ ಪರಿಸ್ಥಿತಿ ಇದೆ. ರಸ್ತೆಯಲ್ಲೆಲ್ಲ ತ್ಯಾಜ್ಯ ಹರಡಿ, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಮಳೆ ಕಾರಣ ಸಾಂಕ್ರಾಮಿಕ ರೋಗದ ಭೀತಿಯೂ ಉಂಟಾಗಿದೆ. ಸುತ್ತಮುತ್ತಲಿನ ನಿವಾಸಿಗಳು ಕೂಡ ಎಚ್ಚೆತ್ತುಕೊಳ್ಳದೆ ಇಲ್ಲಿಯೇ ಕಸವನ್ನು ಎಸೆಯುತ್ತಿದ್ದಾರೆ. ಈ ಸ್ಥಳದಲ್ಲಿ ಕಸ ಹಾಕದಂತೆ ಕೂಡಲೇ ಕ್ರಮ ಕೈಗೊಳ್ಳಬೇಕು.
ಪತ್ತಂಗಿ ಎಸ್. ಮುರಳಿ, ಕುಮಾರಸ್ವಾಮಿ ಬಡಾವಣೆ
ಅವಿನ್ಯೂ ರಸ್ತೆ ಜಂಕ್ಷನ್ ಬಳಿ ಗುಂಡಿಗಳು ಬಿದ್ದಿದ್ದು, ಇದು ಅಪಾಯವನ್ನು ತಂದೊಡ್ಡುತ್ತಿದೆ. ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು, ಗಾಯಗೊಂಡ ಘಟನೆಯೂ ಇದೆ. ಈ ಮಾರ್ಗದಲ್ಲಿ ವಾಹನ ಚಾಲನೆ ಮಾಡುವುದು ದುಸ್ತರವಾಗಿದೆ. ಮಳೆ ಬಂದರೆ ನೀರು ತುಂಬಿಕೊಂಡು ಗುಂಡಿಗಳನ್ನು ಗುರುತಿಸಲು ಸಾಧ್ಯವಿಲ್ಲ. ಸಂಬಂಧಪಟ್ಟವರು ಕೂಡಲೇ ಕ್ರಮವಹಿಸಿ, ಗುಂಡಿಗಳನ್ನು ಮುಚ್ಚಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ಶಿವಪ್ರಸಾದ್, ವಾಹನ ಸವಾರ
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ರಾಜಮಹಲ್ ಗುಟ್ಟಹಳ್ಳಿಯಲ್ಲಿ ಒಳಚರಂಡಿ ಕಾಮಗಾರಿ ಪ್ರಾರಂಭವಾಗಿ ಹತ್ತು ತಿಂಗಳೇ ಕಳೆದಿದ್ದು, ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಒಳಚರಂಡಿ ಮುಚ್ಚದ ಕಾರಣ ಗಬ್ಬು ನಾರುತ್ತಿದ್ದು, ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಅವರು ಪರಸ್ಪರ ಆರೋಪ ಮಾಡಿಕೊಂಡು ಕಾಮಗಾರಿಯನ್ನು ಸ್ಥಗಿತ ಮಾಡಿದ್ದಾರೆ. ಇದರಿಂದ ಪ್ರತಿನಿತ್ಯ ನರಕ ಯಾತನೆ ಅನುಭವಿಸುತ್ತಿದ್ದು, ಕೂಡಲೇ ಇದಕ್ಕೆ ಪರಿಹಾರ ಒದಗಿಸಬೇಕು.
ಸ್ಥಳೀಯ ನಾಗರಿಕರು
ರಾಜಮಹಲ್ ಗುಟ್ಟಹಳ್ಳಿಯಲ್ಲಿ ಒಳಚರಂಡಿ ಕಾಮಗಾರಿ ಸ್ಥಗಿತಗೊಂಡಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.