ಬಂಧನ
ಬೆಂಗಳೂರು: ವ್ಯಾಪಾರದ ವಿಚಾರಕ್ಕೆ ಪಕ್ಕದ ಬಟ್ಟೆ ಅಂಗಡಿ ಮಾಲೀಕನ ಕೊಲೆಗೆ ಸುಪಾರಿ ನೀಡಿದ್ದ ಟೆಕ್ಸ್ಟೈಲ್ಸ್ ಮಳಿಗೆ ಮಾಲೀಕನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುದ್ದಣ್ಣ ಲೇಔಟ್ ನಿವಾಸಿ ವೇನರಾಮ್(43) ಬಂಧಿತ.
ಆರೋಪಿ ತನ್ನ ಟೆಕ್ಸ್ಟೈಲ್ಸ್ ಪಕ್ಕದ ಬಟ್ಟೆ ಅಂಗಡಿ ಮಾಲೀಕ ನೇಮರಾಮ್(42) ಅವರ ಕೊಲೆಗೆ ₹5 ಲಕ್ಷಕ್ಕೆ ಸುಪಾರಿ ನೀಡಿದ್ದ. ಸುಪಾರಿ ಪಡೆದ ರಾಜಸ್ಥಾನ ಮೂಲದ ವಿನೋದ್ ಜಾಟ್ ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಬಾಗಲಗುಂಟೆಯ ಮುದ್ದಣ್ಣ ಲೇಔಟ್ನ ಸಿಡೇದಹಳ್ಳಿಯಲ್ಲಿ ನೇಮರಾಮ್ ಹ್ಯಾಪಿ ಟೆಕ್ಸ್ಟೈಲ್ಸ್ ಬಟ್ಟೆ ಅಂಗಡಿ ನಡೆಸುತ್ತಿದ್ದಾರೆ. ಅಂಗಡಿ ಪಕ್ಕದಲ್ಲೇ ಆರೋಪಿ ವೇನರಾಮ್ ಕೂಡ ಹೈ ಫ್ಯಾಷನ್ಸ್ ಟೆಕ್ಸ್ಟೈಲ್ಸ್ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ. ನೇಮರಾಮ್ ಅಂಗಡಿಯಲ್ಲಿ ಉತ್ತಮವಾಗಿ ವ್ಯಾಪಾರ ನಡೆಯುತ್ತಿತ್ತು. ಹೀಗಾಗಿ, ಆರೋಪಿ ವೇನರಾಮ್, ‘ದೂರುದಾರ ನೇಮರಾಮ್ ಅಂಗಡಿಯಲ್ಲಿ ಕಳಪೆ ಗುಣಮಟ್ಟದ ಬಟ್ಟೆಗಳಿವೆ’ ಎಂಬುದಾಗಿ ಅಪಪ್ರಚಾರ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.
₹5 ಲಕ್ಷಕ್ಕೆ ಸುಪಾರಿ: ಈ ಮಧ್ಯೆ ನೇಮರಾಮ್, ವೇನರಾಮ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನಿಗೆ ಹೆಚ್ಚಿನ ಸಂಬಳ ಕೊಟ್ಟು ತನ್ನ ಅಂಗಡಿಗೆ ಸೇರಿಸಿಕೊಂಡಿದ್ದರು. ಅದರಿಂದ ಕೋಪಗೊಂಡಿದ್ದ ಆರೋಪಿ, ರಾಜಸ್ಥಾನದ ವಿನೋದ್ ಜಾಟ್ ಎಂಬಾತನಿಗೆ ನೇಮರಾಮ್ನ ಹತ್ಯೆಗೆ ₹5 ಲಕ್ಷಕ್ಕೆ ಸುಪಾರಿ ನೀಡಿದ್ದ. ಅದರಂತೆ ಆರೋಪಿಗಳು ಅಂಗಡಿ ವ್ಯಾಪಾರ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ನೇಮರಾಮ್ ಮೇಲೆ ಎರಡು ಬೈಕ್ಗಳಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.