
ಬೆಂಗಳೂರು: ಅಂಗವಿಕಲ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಆಡುಗೋಡಿಯ ಎಂ.ಆರ್. ನಗರದ ನಿವಾಸಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಕೋರಮಂಗಲದ ಎಲ್.ಆರ್.ನಗರದ ನಿವಾಸಿ ವಿಕ್ರಂ ಎಂಬಾತನನ್ನು ಬಂಧಿಸಿದ್ದಾರೆ.
21 ವರ್ಷದ ಅಂಗವಿಕಲ ಯುವತಿಯನ್ನು ಮನೆಯಲ್ಲಿ ಬಿಟ್ಟು ಪೋಷಕರು ಮದುವೆ ಸಮಾರಂಭಕ್ಕೆ ತೆರಳಿದ್ದರು. ಹೊರಗಡೆಯಿಂದ ಚಿಲಕ ಹಾಕಿಕೊಂಡು ಹೋಗಿದ್ದರು. ಗಾಂಜಾ ನಶೆಯಲ್ಲಿ ಮನೆಯ ಬಳಿಗೆ ಬಂದಿದ್ದ ಆರೋಪಿ, ಬಾಗಿಲು ಚಿಲಕ ತೆಗೆದುಕೊಂಡು ಮನೆಯ ಒಳಕ್ಕೆ ಹೋಗಿದ್ದ. ಮದುವೆ ಸಮಾರಂಭ ಮುಗಿಸಿಕೊಂಡು ಮಧ್ಯಾಹ್ನದ ವೇಳೆಗೆ ಯುವತಿಯ ತಾಯಿ ಮನೆಗೆ ಬಂದಾಗ ಒಳಗಿನಿಂದ ಬಾಗಿಲ ಚಿಲಕ ಹಾಕಲಾಗಿತ್ತು. ಆತಂಕಗೊಂಡು ಬಾಗಿಲು ಒದ್ದು ಒಳಗೆ ಹೋಗಿ ನೋಡಿದಾಗ ಆರೋಪಿ ಒಳಗಿದ್ದ. ಯುವತಿಯ ತಾಯಿಯನ್ನು ಕಂಡು ಪರಾರಿಯಾಗಲು ಯತ್ನಿಸಿದ. ಸ್ಥಳಿಯರೇ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
‘ಆರೋಪಿ ಎಲ್ಲಿಯೂ ಕೆಲಸಕ್ಕೆ ತೆರಳುತ್ತಿರಲಿಲ್ಲ ಎಂಬುದು ಗೊತ್ತಾಗಿದೆ. ಗಾಂಜಾ ನಶೆಯಲ್ಲಿ ಮನೆಯ ಒಳಗೆ ಹೋಗಿದ್ದ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.