ADVERTISEMENT

ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ರಾಜೀವ್‌ಗೆ ₹1 ಲಕ್ಷ ದಂಡ!

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:55 IST
Last Updated 8 ಮೇ 2025, 15:55 IST
ರಾಜೀವ್
ರಾಜೀವ್   

ಕೆ.ಆರ್.ಪುರ: ರಾಜಕಾಲುವೆ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಬಡಾವಣೆ ನಿರ್ಮಿಸಲಾಗಿದೆ ಎಂಬ ದೂರಿಗೆ ಸಂಬಂಧಿಸಿದಂತೆ ವರದಿ ನೀಡದ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ರಾಜೀವ್ ಅವರಿಗೆ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ₹1 ಲಕ್ಷ ದಂಡ ವಿಧಿಸಿದೆ.

ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಗ್ರಾಮದ ಸರ್ವೆ ನಂ 299 ಹಾಗೂ ಬೆಳತ್ತೂರಿನ ಸರ್ವೆ ಸಂ 11/4ಎ , 11/4 ಬಿ ಜಮೀನಲ್ಲಿ 9 ಗುಂಟೆ ಕಾಲುವೆ ಜಾಗವನ್ನು ಅತಿಕ್ರಮಿಸಿಕೊಂಡು ಭೂ ಸಾಯಿಚರಣ ಎಂಬ ಹೆಸರಿನಲ್ಲಿ ಅಕ್ರಮ ಬಡಾವಣೆ ನಿರ್ಮಿಸಲಾಗಿದೆ ಎಂದು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿ ಕಾಲಾವಕಾಶ ಕಲ್ಪಿಸಿತ್ತು. ವರದಿ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದ್ದರೂ ತಹಶೀಲ್ದಾರ್ ರಾಜೀವ್ ವರದಿ ಸಲ್ಲಿಸಿರಲಿಲ್ಲ. ಈ ಕಾರಣಕ್ಕೆ ದಂಡ ವಿಧಿಸಿ, ಜೂನ್ 23ರಂದು ಖುದ್ದು ಹಾಜರಾಗುವಂತೆ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಕೆ.ಆರ್.ಪುರ ಠಾಣಾಧಿಕಾರಿಗಳಿಗೆ ವಾರಂಟ್ ರವಾನಿಸಿದೆ.

‘ತಹಶೀಲ್ದಾರ್‌ಗೆ ನ್ಯಾಯಾಲಯ ಹಲವು ಬಾರಿ ಸೂಕ್ತ ದಾಖಲೆಗಳೊಂದಿಗೆ ವರದಿ ಸಲಿಸುವಂತೆ ಸೂಚನೆ ನೀಡಿದರೂ ವರದಿ ಸಲಿಸಲಿಲ್ಲ. ಒತ್ತುವರಿದಾರರ ಜೊತೆ ತಹಶೀಲ್ದಾರ್ ಶಾಮಿಲಾಗಿ ಸರ್ಕಾರಿ ಜಮೀನು ಉಳಿಸಲು ಮನಸ್ಸು ಮಾಡುತ್ತಿಲ್ಲ’ ಎಂದು ದೂರುದಾರ ಬೆಳತ್ತೂರು ಪರಮೇಶ್ ಆರೋಪಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.