
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಮಾಗಡಿ ರಸ್ತೆಯ ಜಿ.ಟಿ ಮಾಲ್ನ ಮೂರನೇ ಮಹಡಿಯಿಂದ ಹಾರಿ ಸಾಗರ್ (34) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಬೆಳಿಗ್ಗೆ ಮಾಲ್ನ ಬಾಗಿಲುತೆಗೆಯುತ್ತಿದ್ದಂತೆಯೇ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಒಳಕ್ಕೆ ಹೋಗಿದ್ದ ಸಾಗರ್ ಅವರು ನೇರವಾಗಿ ಮೂರನೇ ಮಹಡಿಗೆ ತೆರಳಿದರು. ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.
‘ಮಾಲ್ →ಸಿಬ್ಬಂದಿ ತಕ್ಷಣವೇ ಮಾಹಿತಿ ನೀಡಿದ್ದರು. ಅದನ್ನು ಆಧರಿಸಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಮಾಲ್ ಪ್ರವೇಶದ್ವಾರ, ಎರಡು ಹಾಗೂ ಮೂರನೇ ಮಹಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಯಿತು. ಅವರೇ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
‘ಸಾಗರ್ ಅವರ ತಂದೆ ನಿವೃತ್ತ ಬ್ಯಾಂಕ್ ಉದ್ಯೋಗಿ. ತಾಯಿ ಗೃಹಿಣಿ. ಅವಿವಾಹಿತರಾಗಿದ್ದ ಸಾಗರ್ ಅವರು ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿ ಅನುತ್ತೀರ್ಣ ಆಗಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು 10 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು’ ಎಂದಿದ್ದಾರೆ.
‘ಸಾಗರ್ ಅವರು ಕಳೆದ ವರ್ಷವೂ ಮೆಟ್ರೊ ರೈಲು ನಿಲ್ದಾಣವೊಂದರ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಕಂಡು ಮೆಟ್ರೊ ಸಿಬ್ಬಂದಿ, ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದರು. ಇದರಿಂದ ಎಚ್ಚೆತ್ತ ಕುಟುಂಬಸ್ಥರು ಒಬ್ಬಂಟಯಾಗಿ ಅವರನ್ನು ಹೊರಗೆ ಓಡಾಡಲು ಬಿಡುತ್ತಿರಲಿಲ್ಲ. ಇತ್ತೀಚೆಗೆ
ಆರೋಗ್ಯದಲ್ಲಿ ಚೇತರಿಕೆಯಾಗಿತ್ತು. ಹೀಗಾಗಿ, ಸೋಮವಾರ ಬೆಳಿಗ್ಗೆ ಒಬ್ಬರೇ ಹೊರಗೆ ಬಂದಿದ್ದರು’ ಎಂದು ಮೂಲಗಳು ತಿಳಿಸಿವೆ. ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಘಟನೆ ಬಳಿಕ ಮಾಲ್ಗೆ ಸಾರ್ವಜನಿಕ ರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಟಿಕೆಟ್ ಪಡೆದು ಚಿತ್ರ ವೀಕ್ಷಿಸಲು ಬಂದವರಿಗೂ ನಿರ್ಬಂಧ ವಿಧಿಸಲಾಗಿತ್ತು. ಪೊಲೀಸರ ಪ್ರಕ್ರಿಯೆ ಮುಕ್ತಾಯವಾದ ಮೇಲೆ ಪ್ರವೇಶ ಕಲ್ಪಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.