
ಸಾವು
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಆಟವಾಡಲು ಕೆರೆಯ ನೀರಿಗೆ ಇಳಿದಿದ್ದ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇಔಟ್ನಲ್ಲಿ ಗುರುವಾರ ರಾತ್ರಿ ನಡೆದಿದೆ.
ಸಂಜಯ್ (6) ಹಾಗೂ ಜಗನ್ನಾಥ್ (10) ಮೃತ ಮಕ್ಕಳು. ಸಂಜಯ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಜಗನ್ನಾಥ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಉಲ್ಲಾಳ ಉಪನಗರದ ನಿವಾಸಿ ಸುಬ್ರಮಣ್ಯಂ ಅವರ ಮಕ್ಕಳಾದ ಸಂಜಯ್ ಹಾಗೂ ಜಗನ್ನಾಥ್ ಅವರು ಗುರುವಾರ ಸಂಜೆ ಟ್ಯೂಷನ್ಗೆ ತೆರಳಿದ್ದರು. ಟ್ಯೂಷನ್ ಮುಗಿಸಿಕೊಂಡು ರಾತ್ರಿ ಮನೆಗೆ ವಾಪಸ್ ಬರುವಾಗ ಸಮೀಪದ ಕೆರೆಯಲ್ಲಿ ಆಟವಾಡಲು ನೀರಿಗೆ ಇಳಿದಿದ್ದರು. ಇಬ್ಬರೂ ನೀರಿನಲ್ಲಿ ಮುಳುಗಲು ಆರಂಭಿಸಿದ್ದರು. ಜತೆಯಲ್ಲಿದ್ದ ಮತ್ತೊಬ್ಬ ಬಾಲಕ ಓಡಿಹೋಗಿ ಪೋಷಕರಿಗೆ ಮಾಹಿತಿ ನೀಡಿದ್ದ. ಪೋಷಕರು ಸ್ಥಳಕ್ಕೆ ಬರುವಷ್ಟರಲ್ಲಿ ಸಂಜಯ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಸ್ಥಳೀಯರ ಸಹಾಯದಿಂದ ಜಗನ್ನಾಥ್ನನ್ನು ಮೇಲಕ್ಕೆ ತಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶುಕ್ರವಾರ ಮುಂಜಾನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.
ಸುಬ್ರಹ್ಮಣ್ಯಂ ಅವರು ಗಾರೆ ಕೆಲಸ ಮಾಡುತ್ತಿದ್ದರು. ತಾಯಿ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ಹೇಳಿವೆ.
ಜ್ಞಾನಭಾರತಿ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.