
ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಹೊಂಗಸಂದ್ರದ ಬಳಿಯ ಮುನಿಸುಬ್ಬಾರೆಡ್ಡಿ ಲೇಔಟ್ನಲ್ಲಿ ನಡೆದಿದ್ದ ಗಾರ್ಮೆಂಟ್ಸ್ ಉದ್ಯೋಗಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪುರದ ಬಳಿಯ ಕನಕನಗರದ ನಿವಾಸಿ ಮಂದಣ್ಣ (67) ಬಂಧಿತ ಆರೋಪಿ.
ಸೊಸೆ ಪ್ರಮೋದಾ (35) ಅವರ ಕತ್ತು ಕೊಯ್ದು ಕೊಲೆ ಮಾಡಿ ಆರೋಪಿ ಮಂದಣ್ಣ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಮಂದಣ್ಣನ ಮಗ ಸುರೇಶ್ ಅವರನ್ನು ಮದುವೆಯಾಗಿದ್ದ ಪ್ರಮೋದಾ, ಕೌಟುಂಬಿಕ ಕಾರಣಕ್ಕೆ ಪತಿಯಿಂದ ದೂರವಾಗಿ ಮುನಿಸುಬ್ಬಾರೆಡ್ಡಿ ಲೇಔಟ್ನ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಸುರೇಶ್ ಅವರು ತಂದೆ ಮಂದಣ್ಣ ಮತ್ತು ಮಗಳ ಜತೆಗೆ ಕನಕನಗರದಲ್ಲಿ ನೆಲಸಿದ್ದರು.
ಸೊಸೆ ಪ್ರಮೋದಾ ಅವರಿಗೆ ಮಂದಣ್ಣ ಪರಿಚಿತರಿಂದ ₹1 ಲಕ್ಷ ಹಣವನ್ನು ಕೊಡಿಸಿದ್ದ. ಆದರೆ, ಪ್ರಮೋದಾ ಅವರಿಗೆ ಬಡ್ಡಿ ಪಾವತಿ ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಮಂದಣ್ಣ, ನ.15ರ ರಾತ್ರಿ ಪ್ರಮೋದಾ ಅವರ ಮನೆಗೆ ಬಂದು ಹಣ ವಾಪಸ್ ಕೇಳಿದ್ದ. ಆಗ ಪ್ರಮೋದಾ ನಿಂದಿಸಿದ್ದರು. ಆಗ ಗಲಾಟೆ ನಡೆದು ಚಾಕುವಿನಿಂದ ಕತ್ತು ಕೊಯ್ದು ಮಾಡಿ ಪರಾರಿ ಆಗಿದ್ದ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.