
ಬಂಧನ
ಬೆಂಗಳೂರು: ಪತ್ನಿಗೆ ಪಿಸ್ತೂಲ್ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಮಾಗಡಿ ರಸ್ತೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ಅಭಿಮನ್ಯು ಸಿಂಗ್ ಬಂಧಿತ ಆರೋಪಿ. ಪತಿ ಬಾಲಮುರುಗನ್ ಅವರಿಗೆ ಪಿಸ್ತೂಲ್ ಖರೀದಿಸಲು ಅಭಿಮನ್ಯು ಸಿಂಗ್ ನೆರವು ನೀಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದರು. ಡಿ.23ರ ಸಂಜೆ ಪತ್ನಿ ಭುವನೇಶ್ವರಿಗೆ ಗುಂಡು ಹಾರಿಸಿ ಪತಿ ಬಾಲಮುರುಗನ್ ಕೊಲೆ ಮಾಡಿದ್ದರು.
‘ಆಭರಣ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಮನ್ಯು ಸಿಂಗ್ ಅವರಿಗೆ ಬಾಲಮುರುಗನ್ ಪರಿಚಯವಾಗಿತ್ತು. ಭುವನೇಶ್ವರಿ ಕೆಲಸ ಮಾಡುತ್ತಿದ್ದ ಬ್ಯಾಂಕ್ ಸಮೀಪದಲ್ಲಿದ್ದ ಜಿಮ್ಗೆ ಹೋಗುತ್ತಿದ್ದ ಅಭಿಮನ್ಯು ಸಿಂಗ್ ಅವರನ್ನು ಕೃತ್ಯ ಎಸಗಲು ಬಾಲಮುರುಗನ್ ಬಳಸಿಕೊಂಡಿದ್ದರು. ಭುವನೇಶ್ವರಿಯ ಚಲನವಲನಗಳ ಕುರಿತು ಬಾಲಮುರುಗನ್ ಅವರಿಗೆ ಅಭಿಮನ್ಯು ಮಾಹಿತಿ ನೀಡುತ್ತಿದ್ದರು. ಇಬ್ಬರೂ ಬಿಹಾರಕ್ಕೆ ತೆರಳಿ ಎರಡು ಪಿಸ್ತೂಲ್ ಖರೀದಿಸಿ ತಂದಿದ್ದರು’ ಎಂದು ಪೊಲೀಸರು ಹೇಳಿದರು.
‘ಒಂದು ಪಿಸ್ತೂಲ್ನ್ನು ತಮಿಳುನಾಡಿನ ಸೇಲಂ ಮೌಳೇಶ್ ಎಂಬುವವರಿಗೆ ನೀಡಿ ಪತ್ನಿಯ ಕೊಲೆಗೆ ಸುಪಾರಿ ನೀಡಿದ್ದರು. ನಗರಕ್ಕೆ ಬಂದಿದ್ದ ಮೌಳೇಶ್, ಬಾಲಮುರುಗನ್ ಅವರ ಸೂಚನೆಯಂತೆ ಭುವನೇಶ್ವರಿ ಕೆಲಸ ಮಾಡುತ್ತಿದ್ದ ಸ್ಥಳ ಮತ್ತು ಓಡಾಡುವ ರಸ್ತೆಗಳಲ್ಲಿ ಕೆಲವು ದಿನ ಚಲನವಲನ ಗಮನಿಸಿದ್ದರು. ಆದರೆ, ಕೃತ್ಯ ಎಸಗುವ ದಿನ ಮೌಳೇಶ್ ಕೈಕೊಟ್ಟು ವಾಪಸ್ ತಮಿಳುನಾಡಿಗೆ ಹಿಂದಿರುಗಿದ್ದರು. ಕೊನೆಗೆ ಬಾಲಮುರುಗನ್ ಅವರೇ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಬಳಿಕ ಠಾಣೆಗೆ ತೆರಳಿ ಶರಣಾಗಿದ್ದರು’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.