ಸಾವು
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಜ್ಞಾನಭಾರತಿ, ಕುಮಾರಸ್ವಾಮಿ ಲೇಔಟ್ ಹಾಗೂ ಸಿಟಿ ಮಾರುಕಟ್ಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಿಗ್ಗೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿದ್ದಾರೆ.
ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಟಾಏಸ್, ಬೈಕ್ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ತಮಿಳುನಾಡಿನ ಮನಿಗೊಂಡನ್(45) ಮೃತಪಟ್ಟಿದ್ದಾರೆ. ನಿಂಗಪ್ಪ(46) ಅವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಪೇಯಿಂಟಿಂಗ್ ಕೆಲಸ ಮಾಡುತ್ತಿದ್ದರು.
ಬುಧವಾರ ಬೆಳಿಗ್ಗೆ ಸೊನ್ನೇನಹಳ್ಳಿ ಬಸ್ ನಿಲ್ದಾಣದ ಬಳಿ ದುರ್ಘಟನೆ ನಡೆದಿದೆ. ಟಾಟಾಏಸ್ ವಾಹನದ ಚಾಲಕ ಗಂಗಾಧರ್(36) ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಪೇಟಿಂಗ್ ಕೆಲಸ ಮಾಡುವ ಮನಿಗೊಂಡನ್ ಅವರು ತಮ್ಮ ಸಹಾಯಕ ನಿಂಗಪ್ಪ ಅವರ ಜತೆಗೆ ಬೈಕ್ನಲ್ಲಿ ದೊಡ್ಡಬಸ್ತಿ ಮುಖ್ಯರಸ್ತೆ ಮಾರ್ಗವಾಗಿ ಸೊನ್ನೇನಹಳ್ಳಿ ಕಡೆಗೆ ಹೋಗುತ್ತಿದ್ದರು. ಆಗ ಹಿಂದಿನಿಂದ ವೇಗವಾಗಿ ಬಂದ ಟಾಟಾಏಸ್ ವಾಹನವು ಬೈಕ್ಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ ಬೈಕ್, ನಿಂತಿದ್ದ ಬಿಎಂಟಿಸಿ ಬಸ್ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಕೆಎಸ್ಆರ್ಟಿಸಿ ಬಸ್ ಡಿಕ್ಕಿ– ವೃದ್ಧ ಸಾವು: ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಜರಗನಹಳ್ಳಿಯ ನಿವಾಸಿ ಗಂಗಾಧರಯ್ಯ(67) ಮೃತಪಟ್ಟಿದ್ದಾರೆ. ಬುಧವಾರ ಬೆಳಿಗ್ಗೆ 8.45ರ ಸುಮಾರಿಗೆ ಗಂಗಾಧರಯ್ಯ ಬೈಕ್ನಲ್ಲಿ ತೆರಳುತ್ತಿದ್ದರು.
ವ್ಯಾಪಾರಿ ಸಾವು: ಸಿಟಿ ಮಾರುಕಟ್ಟೆ ಬಳಿ ಚಲಿಸುತ್ತಿದ್ದ ಬಸ್ನಿಂದ ಕೆಳಕ್ಕೆ ಬಿದ್ದು ತಳ್ಳು ಗಾಡಿ ವ್ಯಾಪಾರಿ, ಗೋವಿಂದಪುರದ ನಿವಾಸಿ ನಜೀರ್ ಖಾನ್ (52) ಮೃತಪಟ್ಟಿದ್ದಾರೆ.
ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ನಜೀರ್ ಖಾನ್ ಅವರು ಕೆಲಸ ಮುಗಿಸಿಕೊಂಡು ಸಿಟಿ ಮಾರುಕಟ್ಟೆಯ ಮೇಲ್ಸೇತುವೆ ಕೆಳಗೆ ನಿಂತಿದ್ದ ಬಿಎಂಟಿಸಿ ಬಸ್ ಹತ್ತಲು ಹೋದಾಗ, ಬಸ್ ಮುಂದಕ್ಕೆ ಸಾಗಿದೆ. ಕೆಳಕ್ಕೆ ಬಿದ್ದ ಅವರ ಮೇಲೆಯೇ ಬಸ್ ಹರಿದು ಮೃತಪಟ್ಟಿದ್ದಾರೆ. ಸಿಟಿ ಮಾರುಕಟ್ಟೆ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.