ADVERTISEMENT

ಸವಾರರ ಸಮಸ್ಯೆಗೆ ಲಭಿಸಿದ ಮುಕ್ತಿ: ಪ್ರಜಾವಾಣಿ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 20:02 IST
Last Updated 4 ಅಕ್ಟೋಬರ್ 2021, 20:02 IST
ಒಳಚರಂಡಿಗೆ ಸಮನಾಗಿ ಡಾಂಬರು ಹಾಕಿರುವುದು 
ಒಳಚರಂಡಿಗೆ ಸಮನಾಗಿ ಡಾಂಬರು ಹಾಕಿರುವುದು    

ಬೆಂಗಳೂರು:ಶ್ರೀನಿವಾಸನಗರದ 9ನೇ ತಿರುವಿನಲ್ಲಿ ರಸ್ತೆಗೆ ಅಡ್ಡಲಾಗಿರುವ ಒಳಚರಂಡಿಗೆ ಕಾಂಕ್ರಿಟ್‌ ರೂಪ ನೀಡುವ ವೇಳೆ ಅದನ್ನು ರಸ್ತೆಗಿಂತಲೂ ಎರಡು ಅಡಿಯಷ್ಟು ಎತ್ತರಿಸಲಾಗಿತ್ತು. ಮೂರು ತಿಂಗಳಾದರೂ ಅದಕ್ಕೆ ಸಮನಾಗಿ ಮಣ್ಣು ಹಾಕಿ ಮುಚ್ಚುವ ಕೆಲಸವಾಗಿರಲಿಲ್ಲ.

ಈ ಕುರಿತು ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯ ‘ಕುಂದುಕೊರತೆ’ ಕಾಲಂನಲ್ಲಿ ‘ವಾಹನ ಸವಾರರ ಸಂಕಟ ತಪ್ಪಿಸಿ’ ಶೀರ್ಷಿಕೆಯ ಅಡಿಯಲ್ಲಿ ಸುದ್ದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಸೋಮವಾರ ಮಧ್ಯಾಹ್ನವೇ ಒಳಚರಂಡಿಯ ಮೇಲಿನ ಸಿಮೆಂಟ್‌ ಚಪ್ಪಡಿಗಳಿಗೆ ಸಮನಾಗಿ ಡಾಂಬರು ಹಾಕಿ ಮುಚ್ಚುವ ಕೆಲಸ ಮಾಡಿದ್ದಾರೆ. ಹೀಗಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ನಿರಾಳರಾಗಿದ್ದಾರೆ. ಮುಖ್ಯ ರಸ್ತೆಯಿಂದ ಒಳ ರಸ್ತೆಗೆ ಪ್ರವೇಶಿಸುವ ವಾಹನ ಸವಾರರು ಆಯತಪ್ಪಿ ಬೀಳುವ ಅಪಾಯವೂ ತಪ್ಪಿದೆ.

‘ಈ ಅವೈಜ್ಞಾನಿಕ ಕಾಮಗಾರಿಯಿಂದ ನಾವು ರೋಸಿಹೋಗಿದ್ದೆವು. ವಾಹನಗಳಿಗೂ ಸಾಕಷ್ಟು ಹಾನಿಯಾಗಿತ್ತು. ಈ ಕುರಿತು ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ‘ಪ್ರಜಾವಾಣಿ’ಯು ಈ ಕುರಿತ ಸುದ್ದಿ ಪ್ರಕಟಿಸುವ ಮೂಲಕ ಅಧಿಕಾರಿಗಳನ್ನು ಎಚ್ಚರಿಸಿದೆ. ಇದಕ್ಕಾಗಿ ಪತ್ರಿಕೆಗೆ ನಾವು ಆಭಾರಿಯಾಗಿದ್ದೇವೆ. ಇನ್ನು ಮುಂದಾದರೂ ಈ ಮಾರ್ಗದಲ್ಲಿ ನಿಶ್ಚಿಂತೆಯಿಂದ ಸಾಗಬಹುದು’ ಎಂದು ಸ್ಥಳೀಯರು ಖುಷಿ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.