ಸಾಂದರ್ಭಿಕ ಚಿತ್ರ
– ಐ ಸ್ಟಾಕ್ ಚಿತ್ರ
ಬೆಂಗಳೂರು: ಹೊಸಕೆರೆಹಳ್ಳಿ ಬಳಿಯ ಈಶ್ವರಿನಗರದಲ್ಲಿ ಇಬ್ಬರು ಮಹಿಳೆಯರನ್ನು ಮಾರಕಾಸ್ತ್ರಗಳಿಂದ ಬೆದರಿಸಿ 54 ಗ್ರಾಂ ಚಿನ್ನಾಭರಣವನ್ನು ದೋಚಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ.
ವರಲಕ್ಷ್ಮಿ ಹಾಗೂ ಅವರ ಸ್ನೇಹಿತೆ ಬಿ.ಎಂ.ಉಷಾ ಅವರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆ.13ರಂದು ಈ ಘಟನೆ ನಡೆದಿದೆ.
ಚಿನ್ನದ ಸರ ಕಸಿದುಕೊಳ್ಳುವ ಸಂದರ್ಭದಲ್ಲಿ ಪ್ರತಿರೋಧ ತೋರಿದ ವರಲಕ್ಷ್ಮಿ ಎಂಬುವವರ ಕೈಗೆ ಆರೋಪಿಗಳು ಲಾಂಗ್ನಿಂದ ಹೊಡೆದು ಗಾಯಗೊಳಿಸಿದ್ದಾರೆ. ವರಲಕ್ಷ್ಮಿಅವರ ಬಲಗೈನ ಬೆರಳು ತುಂಡಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಋಷಿಕೇಶ ನಗರದ ನಿವಾಸಿಗಳಾದ ಉಷಾ ಮತ್ತು ವರಲಕ್ಷ್ಮಿ ಅವರು ಈಶ್ವರಿನಗರದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಿದ್ದ ಸ್ಥಳದಲ್ಲಿ ನಡೆಯುತ್ತಿದ್ದ ರಸಮಂಜರಿ ಕಾರ್ಯಕ್ರಮ ವೀಕ್ಷಿಸಲು ತೆರಳಿದ್ದರು. ಆಗ ಇಬ್ಬರು ದುಷ್ಕರ್ಮಿಗಳು ಅವರನ್ನು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿ, ಲಾಂಗ್ನಿಂದ ಬೆದರಿಸಿ ಉಷಾ ಅವರ 9 ಗ್ರಾಂ ಚಿನ್ನದ ಸರ ಕಿತ್ತುಕೊಂಡಿದ್ದಾರೆ. ನಂತರ, ವರಲಕ್ಷ್ಮಿ ಅವರ ಸರ ಕಿತ್ತುಕೊಳ್ಳಲು ಯತ್ನಿಸಿದ್ದರು. ಇದಕ್ಕೆ ವರಲಕ್ಷ್ಮಿಅವರು ಪ್ರತಿರೋಧ ತೋರಿದಾಗ ದುಷ್ಕರ್ಮಿಗಳು ಅವರ ಬಲಗೈಗೆ ಮಾರಕಾಸ್ತ್ರದಿಂದ ಹೊಡೆದು 45 ಗ್ರಾಂ ಚಿನ್ನದ ಸರ ದೋಚಿ ಪರಾರಿ ಆಗಿದ್ದಾರೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.