ADVERTISEMENT

ಕ್ಯಾನ್ಸರ್‌ ಚಿಕಿತ್ಸೆಗೆ ‘ಸ್ಮಾರ್ಟ್‌’ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 2:08 IST
Last Updated 19 ನವೆಂಬರ್ 2019, 2:08 IST
ಡಾ. ರಾಧೇಶ್ಯಾಮ್‌ ಮಾತನಾಡಿದರು. ತಜ್ಞ ವೈದ್ಯರಾದ ಡಾ.ರಾಹುಲ್‌ ಪುರ್ವಾರ್‌, ವಿಜಯ್‌ ಚಂದ್ರು, ಅರುಣ್‌ ಆನಂದ್ ಇದ್ದಾರೆ - ಪ್ರಜಾವಾಣಿ ಚಿತ್ರ
ಡಾ. ರಾಧೇಶ್ಯಾಮ್‌ ಮಾತನಾಡಿದರು. ತಜ್ಞ ವೈದ್ಯರಾದ ಡಾ.ರಾಹುಲ್‌ ಪುರ್ವಾರ್‌, ವಿಜಯ್‌ ಚಂದ್ರು, ಅರುಣ್‌ ಆನಂದ್ ಇದ್ದಾರೆ - ಪ್ರಜಾವಾಣಿ ಚಿತ್ರ   

ಬೆಂಗಳೂರು: ಕ್ಯಾನ್ಸರ್‌ಗೆ ಯಾತನೆರಹಿತ ಚಿಕಿತ್ಸೆ ನೀಡಲು ‘ಸ್ಮಾರ್ಟ್‌’ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಈ ನಿಟ್ಟಿನಲ್ಲಿ ‘ಕಾರ್‌ –ಟಿ ಇಮ್ಯುನೋ’ ವಿಧಾನ ಅತ್ಯಂತ ಸಹಕಾರಿಯಾಗಿದೆ ಎಂದು ತಜ್ಞ ವೈದ್ಯರು ಹೇಳಿದರು.

‘ಕ್ಯಾನ್ಸರ್‌ ಚಿಕಿತ್ಸೆ ಸ್ಮಾರ್ಟ್‌ ಚಿಕಿತ್ಸೆ’ ಕುರಿತು ನಡೆದ ಗೋಷ್ಠಿಯಲ್ಲಿ ಮಾತನಾಡಿದ ಹೆಲ್ತ್‌ಕೇರ್‌ ಗ್ಲೋಬಲ್‌ನ ಡಾ. ರಾಧೇಶ್ಯಾಮ್‌ ನಾಯ್ಕ್‌, ‘ಕಿಮೋಥೆರಪಿ ಕ್ಯಾನ್ಸರ್‌ ಕೋಶಗಳನ್ನು ಮಾತ್ರವಲ್ಲದೆ, ದೇಹದ ಇತರೆ ಆರೋಗ್ಯಕರ ಕೋಶಗಳನ್ನೂ ನಾಶ ಮಾಡುತ್ತದೆ. ಇದರಿಂದ ರೋಗಿ ಕಿಮೋಥೆರಪಿ ಪಡೆದ ಸಂದರ್ಭದಲ್ಲಿ ತೀವ್ರತರವಾಗಿ ಬಳಲುತ್ತಾನೆ. ಆದರೆ, 'ಕಾರ್‌–ಟಿ' ಚಿಕಿತ್ಸೆಯಲ್ಲಿ ರೋಗಿಗೆ ಯಾವುದೇ ರೀತಿಯ ಯಾತನೆ ಇರುವುದಿಲ್ಲ. ಇದು ಕ್ಯಾನ್ಸರ್‌ ಕೋಶಗಳು ಮಾತ್ರ ನಿಷ್ಕ್ರಿಯಗೊಳಿಸುತ್ತದೆ’ ಎಂದರು.

‘ಈ ಇಮ್ಯುನೊ ಥೆರಪಿಯಿಂದ ಕ್ಯಾನ್ಸರ್‌ ಗುಣಪಡಿಸಲು ಸಾಧ್ಯ. ಈ ವಿಧಾನದ ಮೂಲಕ ಕ್ಯಾನ್ಸರ್‌ ಗುಣಪಡಿಸಬಹುದು ಎಂದು ಸಾಬೀತು ಪಡಿಸಿದ ಇಬ್ಬರು ವಿಜ್ಞಾನಿಗಳಿಗೆ ಈ ಬಾರಿ ನೊಬೆಲ್‌ ಪ್ರಶಸ್ತಿ ಲಭಿಸಿರುವುದನ್ನು ಇಲ್ಲಿ ಸ್ಮರಿಸಬಹುದು’ ಎಂದು ಅವರು ಹೇಳಿದರು.

ADVERTISEMENT

‘ಇಮ್ಯುನೊ ಥೆರಪಿ ವಿಧಾನದಲ್ಲಿ ಕ್ಯಾನ್ಸರ್‌ ಕೋಶಗಳನ್ನು ನಾಶಪಡಿಸುವ ಬದಲು ಟಿ-ಕೋಶಗಳ ಮೇಲೆ ಕೂತಿರುವ ಪ್ರೋಟೀನ್‌ ತೆಗೆದುಹಾಕಲಾಗುತ್ತದೆ. ಇದರಿಂದ ಟಿ-ಕೋಶ ಮತ್ತೆ ಕಾರ್ಯಪ್ರವೃತ್ತವಾಗುತ್ತದೆ. ಬಹುಮುಖ್ಯವಾಗಿ ಕೋಶಗಳನ್ನು ರಿ ಎಂಜಿನಿಯರಿಂಗ್‌ ಮಾಡಿ ಅದನ್ನು ಮರಳಿ ಒದಗಿಸಲಾಗುತ್ತದೆ. ಬಹಳ ಕಡಿಮೆ ಜನಕ್ಕೆ ಈ ಚಿಕಿತ್ಸೆ ಸಾಧ್ಯ. ರೋಗಿಯೊಬ್ಬರು ಈ ಚಿಕಿತ್ಸೆ ಪಡೆಯಲು ಸದ್ಯ ₹2.5ಕೋಟಿಯಿಂದ ₹3 ಕೋಟಿ ಖರ್ಚಾಗುತ್ತದೆ. ಸದ್ಯ ಭಾರತದಲ್ಲೆಲ್ಲೂ ಈ ಚಿಕಿತ್ಸೆ ನೀಡಲಾಗುತ್ತಿಲ್ಲ. ದೇಶದಲ್ಲಿ ಈ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದರೆ ಚಿಕಿತ್ಸಾ ವೆಚ್ಚ ಕಡಿಮೆಯಾಗಬಹುದು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ’ ಎಂದು ರಾಧೇಶ್ಯಾಮ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.