ADVERTISEMENT

ಬಿಜಿಎಸ್ ಹೆಲ್ತ್‌ ಸಿಟಿ: ಸಂಸ್ಥಾಪಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 20:02 IST
Last Updated 24 ನವೆಂಬರ್ 2022, 20:02 IST
ಬಿಜಿಎಸ್ ಹೆಲ್ತ್ ಸಿಟಿಯಲ್ಲಿ ಆಯೋಜಿಸಲಾಗಿದ್ದ 14ನೇ ವರ್ಷದ ಬಿಜಿಎಸ್ ಸಂಸ್ಥಾಪಕರ ದಿನಾಚರಣೆ ಹಾಗೂ ಬಿಜಿಎಸ್ ಉತ್ಸವ್–2022 ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ನಿರ್ಮಲಾನಂದನಾಥ ಸ್ವಾಮೀಜಿ, ಡಾ.ಪ್ರಕಾಶನಾಥ ಸ್ವಾಮೀಜಿ, ಸಚಿವರಾದ ಆರ್. ಅಶೋಕ, ಎಸ್.ಟಿ.ಸೋಮಶೇಖರ್, ಶಾಸಕ ರಾಜೂಗೌಡ, ಮಾಜಿ ಸಂಸದೆ ರಮ್ಯಾ ಇದ್ದರು.
ಬಿಜಿಎಸ್ ಹೆಲ್ತ್ ಸಿಟಿಯಲ್ಲಿ ಆಯೋಜಿಸಲಾಗಿದ್ದ 14ನೇ ವರ್ಷದ ಬಿಜಿಎಸ್ ಸಂಸ್ಥಾಪಕರ ದಿನಾಚರಣೆ ಹಾಗೂ ಬಿಜಿಎಸ್ ಉತ್ಸವ್–2022 ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ನಿರ್ಮಲಾನಂದನಾಥ ಸ್ವಾಮೀಜಿ, ಡಾ.ಪ್ರಕಾಶನಾಥ ಸ್ವಾಮೀಜಿ, ಸಚಿವರಾದ ಆರ್. ಅಶೋಕ, ಎಸ್.ಟಿ.ಸೋಮಶೇಖರ್, ಶಾಸಕ ರಾಜೂಗೌಡ, ಮಾಜಿ ಸಂಸದೆ ರಮ್ಯಾ ಇದ್ದರು.   

ಕೆಂಗೇರಿ: ಧಾರ್ಮಿಕ, ವೈಜ್ಞಾನಿಕ ಮನೋಭಾವ ಎರಡನ್ನೂ ಹೊಂದಿದ್ದ ಬಾಲಗಂಗಾಧರನಾಥ ಸ್ವಾಮೀಜಿ, ಉದಾತ್ತ ಚಿಂತನೆಯೊಂದಿಗೆ ಬಿಜಿಎಸ್ ಶಿಕ್ಷಣ ಸಂಸ್ಥೆಗೆ ಅಡಿಗಲ್ಲು ಹಾಕಿದ್ದರು. ನೂರಾರು ವಿವಿಧ ಬಗೆಯ ಶಾಲೆಗಳೊಂದಿಗೆ ಇಂದು ಬೃಹದಾಕಾರವಾಗಿ ಬೆಳೆದಿರುವ ಈ ಸಂಸ್ಥೆಯು ಜ್ಞಾನ, ವಿಜ್ಞಾನ, ಸಂಸ್ಕಾರ ಹರಡುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜಿಎಸ್ ಶೈಕ್ಷಣಿಕ ಸಂಸ್ಥೆ ಸಮೂಹ ವತಿಯಿಂದ ಬಿಜಿಎಸ್ ಹೆಲ್ತ್ ಸಿಟಿ ಯಲ್ಲಿ ಆಯೋಜಿಸಲಾಗಿದ್ದ 14ನೇ ಸಂಸ್ಥಾಪಕರ ದಿನಾಚರಣೆ ಹಾಗೂ ಬಿಜಿಎಸ್ ಉತ್ಸವ್-2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಸಾಧ್ಯವೆಂಬುದು ಮನದಲ್ಲಿ ಅಡಗಿರುವ ನಕಾರಾತ್ಮಕ ಭಾವನೆಯಷ್ಟೆ. ದಿಟ್ಟ ನಿರ್ಧಾರದೊಂದಿಗೆ ಮುಂದಡಿಯಿಟ್ಟರೆ ಯಾವುದೇ ಕಾರ್ಯ ಅಸಾಧ್ಯವಲ್ಲ ಎಂದರು.

ADVERTISEMENT

ಆದಿ ಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಹಣದಿಂದ, ಕರ್ಮದಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಕೆಲಸ, ದಾನಗಳಿಂದ ಭಗವಂತನನ್ನು ಕಾಣಲು ಸಾಧ್ಯ’ ಎಂದು ಹೇಳಿದರು.

‘ಹಲವು ದಶಕಗಳಿಂದ ಆದಿಚುಂಚನಗಿರಿ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ. ಬಿಜಿಎಸ್ ಶಿಕ್ಷಣ ಸಂಸ್ಥೆಯಿಂದ ಲಕ್ಷಾಂತರ ವಿದ್ಯಾರ್ಥಿಗಳು ಬದುಕು ಕಟ್ಟಿಕೊಂಡಿದ್ದಾರೆ. ಹಲವಾರು ದೃಷ್ಞಿ ಹೀನ ಮಕ್ಕಳ ಬಾಳಿಗೂ ಬಿಜಿಎಸ್ ಶಿಕ್ಷಣ ಸಂಸ್ಥೆಯು ಬೆಳಕಾಗಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ಶ್ಲಾಘಿಸಿದರು.

ನಟಿ ಹಾಗೂ ಮಾಜಿ ಸಂಸದೆ ರಮ್ಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ‘ಮದುವೆಗೆ ಪ್ರೀತಿ ಕಾರಣವಾಗಿರಬೇಕು. ಒತ್ತಡದಿಂದ ವಿವಾಹ ಬಂಧನಕ್ಕೆ ಒಳಗಾಗುವುದು ನೆಮ್ಮದಿ ತರುವುದಿಲ್ಲ’ ಎಂದು ತಿಳಿಸಿದರು.

ಇದೇ ವೇಳೆಯಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ ನಾಥ ಸ್ವಾಮೀಜಿ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್. ಶಾಸಕ ರಾಜೂಗೌಡ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.