ADVERTISEMENT

ಸಂದರ್ಭ ವಿರುದ್ಧವಿದ್ದರೂ ಸೌಜನ್ಯವಿರಲಿ: ದ್ರಾವಿಡ್

ಬಿಜಿಎಸ್‌ ಅಕಾಡೆಮಿಕ ಶಾಲೆ– ಕ್ರಿಕೆಟ್ ಕ್ರೀಡಾಂಗಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 18:51 IST
Last Updated 10 ಫೆಬ್ರುವರಿ 2021, 18:51 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಟಿ. ಸೋಮಶೇಖರ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ಶ್ರೀಶ್ರೀ ರವಿಶಂಕರ್ ಗುರೂಜಿ, ಸುದೀಪ್‌ ಇತರರು ಇದ್ದಾರೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಟಿ. ಸೋಮಶೇಖರ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ಶ್ರೀಶ್ರೀ ರವಿಶಂಕರ್ ಗುರೂಜಿ, ಸುದೀಪ್‌ ಇತರರು ಇದ್ದಾರೆ   

ಕೆಂಗೇರಿ: ‘ತಂಡದ ನಾಯಕನನ್ನು, ಸಹ ಆಟಗಾರರನ್ನು, ತೀರ್ಪುಗಾರರನ್ನು ಹಾಗೂ ತಂಡದ ಮುಖ್ಯಸ್ಥರನ್ನು ಗೌರವಿಸಿ. ಕೆಲವು
ಸಂದರ್ಭಗಳು ನಿಮ್ಮ ವಿರುದ್ಧವೇ ಇದ್ದರೂ ಸೌಜನ್ಯದಿಂದ ವರ್ತಿಸಿ. ಅದೇ ನಿಜವಾದ ಕ್ರೀಡಾ ಸ್ಫೂರ್ತಿ’ ಎಂದು ಭಾರತ ಕ್ರಿಕೆಟ್‌ ತಂಡದ
ಮಾಜಿ ನಾಯಕ ರಾಹುಲ್ ದ್ರಾವಿಡ್ ಸಲಹೆ ನೀಡಿದರು.

ಕುಂಬಳಗೂಡು ಸಮೀಪದ ಬಿಜಿಎಸ್ ನಾಲೆಡ್ಜ್ ಸಿಟಿ ಆವರಣದಲ್ಲಿ ನಿರ್ಮಾಣವಾಗಿರುವ ಬಿಜಿಎಸ್ ಅಂತಾರಾಷ್ಟ್ರೀಯ
ಅಕಾಡೆಮಿಯ ಶಾಲೆ ಹಾಗೂ ಬಿಜಿಎಸ್ ಕ್ರಿಕೆಟ್ ಕ್ರೀಡಾಂಗಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ರೀಡಾಂಗಣ ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಎಸ್‌ಜೆಬಿ ಶಿಕ್ಷಣ ಸಂಸ್ಥೆ ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಕೈಂಕರ್ಯದಲ್ಲಿ ತೊಡಗಿದೆ. ಸುಮಾರು 500 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸಂಸ್ಥೆ ವತಿಯಿಂದ ನಡೆಸುತ್ತಿರುವುದು ಶ್ಲಾಘನೀಯ’ ಎಂದರು.

ADVERTISEMENT

ನಟ ಸುದೀಪ್, ‘ಬಿಜಿಎಸ್ ವತಿಯಿಂದ ಒಂದು ಅತ್ಯುತ್ತಮ ಕ್ರೀಡಾಂಗಣ ನಿರ್ಮಾಣವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಕ್ರೀಡಾಂಗಣದಲ್ಲಿ ಕ್ರಿಕೆಟಿಗ ರಾಹುಲ್ ಅವರೊಂದಿಗೆ ಆಡುವ ಆಸೆ ವ್ಯಕ್ತ ಪಡಿಸಿದರು.

‘ಯುವ ಸಮೂಹ ಕೇವಲ ಮೊಬೈಲ್, ಕಂಪ್ಯೂಟರ್‌ನಲ್ಲೇ ಸಮಯವನ್ನು ವ್ಯಯಿಸುತ್ತಿದ್ದಾರೆ. ಕ್ರೀಡಾಂಗಣದತ್ತಅವರು ಬರಬೇಕು. ಇದರಿಂದ ಅವರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ’ ಎಂದು ರವಿಶಂಕರ್ ಗುರೂಜಿ ಹೇಳಿದರು.

‘ಉತ್ತಮ ಆರೋಗ್ಯ ಹಾಗೂ ಶಿಕ್ಷಣ ನೀಡುವ ಉದ್ದೇಶ ಹೊಂದಿರುವ ರಾಜ್ಯ ಸರ್ಕಾರ ‘ಫಿಟ್ ಇಂಡಿಯಾ’ ಯೋಜನೆಗೆ ಚಾಲನೆ ನೀಡಿದೆ.
ಉತ್ತಮ ಆರೋಗ್ಯ ಇದ್ದಾಗ ಮಾತ್ರ ಸಮಾಜ ಸುಸ್ಥಿತಿಯಲ್ಲಿರುತ್ತದೆ’ ಎಂದು ಉಪಮುಖ್ಯಮಂತ್ರಿಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್, ‘ಬಿಜಿಎಸ್ ಕ್ರೀಡಾಂಗಣ ಕೆಎಸ್‌ಸಿಎ ಜೊತೆ ಸಹಯೋಗ ಹೊಂದಲಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟೀಯ ಮಟ್ಟದ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲಾಗುವುದು’ ಎಂದರು.

ಕಾರ್ಯಕ್ರಮದಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಬಿ.ಜಿ.ಎಸ್. ಮತ್ತು ಎಸ್.ಜೆ.ಬಿ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥ ಸ್ವಾಮೀಜಿ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.